ಚಿಕ್ಕಮಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್ಡೌನ್ ನಿಯಮಗಳನ್ನು ಸಡಿಲಿಸಿರುವುದರಿಂದ ಮೇ 4 ರಿಂದ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದರು.
ಬಸ್ ಆಸನ ಸಾಮರ್ಥ್ಯದ ಶೇ.50 ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಲು ಅವಕಾಶವಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಮಾತ್ರ ಬಸ್ಗಳು ಸಂಚರಿಸಲಿವೆ. ಆರೆಂಜ್ ಮತ್ತು ರೆಡ್ ಜೋನ್ಗಳಿಗೆ ಬಸ್ಗಳು ಸಂಚರಿಸುವ ಬಗ್ಗೆ ಕೆಎಸ್ಆರ್ಟಿಸಿ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜನರು ತುರ್ತು ಸಂದರ್ಭ ಹೊರತುಪಡಿಸಿ ಬೇರೆ ಕೆಲಸಕ್ಕೆ ಹೊರ ಬರುವಂತಿಲ್ಲ. ಮದುವೆ ಸಮಾರಂಭ 50 ಜನ ಹಾಗೂ ಅಂತ್ಯಸಂಸ್ಕಾರಕ್ಕೆ 20 ಜನ ಭಾಗವಹಿಸಬಹುದು. ಸಲೂನ್ ಸೇರಿದಂತೆ ಎಲ್ಲ ಅಂಗಡಿಗಳು ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ತೆರೆಯಲು ಮಾತ್ರ ಅವಕಾಶವಿರುತ್ತದೆ. ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಅವಕಾಶವಿದ್ದರೂ ಸಾರ್ವಜನಿಕ ಸ್ಥಳದಲ್ಲಿ ಬಳಸುವಂತಿಲ್ಲ. ಮನೆಯಿಂದ ಹೊರ ಬರುವವರು ಮಾಸ್ಕ್ ಧರಿಸುವುದು ಕಡ್ಡಾಯ ಎಂದರು.