ಸಿದ್ದಾಪುರ: ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ 9ನೇ ವಾರ್ಷಿಕೋತ್ಸವ ಅದ್ದೂರಿಯಾಗಿ ನೆರವೇರಿತು.
ಸಿದ್ದಾಪುರ ಸ್ವರ್ಣಮಾಲಾ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ತಮಿಳು ಸಮುದಾಯ ಬಾಂಧವರು ತಮ್ಮದೆ ಆದ ಆಚಾರ, ವಿಚಾರ, ಸಂಸ್ಕೃತಿ ಪರಂಪರೆಯೊಂದಿಗೆ ಜೀವನ ನಡೆಸುತ್ತಿದ್ದಾರೆ. ಪಾಲಕರು ಮಕ್ಕಳ ಬಗ್ಗೆ ಹೆಚ್ಚಿನ ಗಮನ ವಹಿಸಿ ಶಿಕ್ಷಣದ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿಜು ಸುಬ್ರಮಣಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ತಮಿಳು ಬಾಂಧವರು ಜಿಲ್ಲೆಯ ಆಚಾರ, ವಿಚಾರ ಸಂಸ್ಕೃತಿಯೊಂದಿಗೆ ಜೀವನ ನಡೆಸುತ್ತಿದ್ದಾರೆ. ಕಾವೇರಿ ತಮಿಳು ಸಂಘ ಕಳೆದ 9 ವರ್ಷಗಳಿಂದ ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಸಮಾಜ ಸೇವೆಯೊಂದಿಗೆ ಮುನ್ನಡೆಯುತ್ತಿದ್ದು, ಸಮಾಜ ಬಾಂಧವರನ್ನು ಒಗ್ಗೂಡಿಸಿ ಸಂಸ್ಕೃತಿ ಬಿಂಬಿಸುವುದರ ಮೂಲಕ ಒಗ್ಗಟ್ಟಿನೊಂದಿಗೆ ಮುನ್ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ವಾರ್ಷಿಕೋತ್ಸವ ಅಂಗವಾಗಿ ನೃತ್ಯ, ಸಂಗೀತ, ಗೀತ ಗಾಯನ, ಮ್ಯಾಜಿಕ್ ಶೋ ರಂಗೋಲಿ ಸ್ವರ್ಧೆ ಆಯೋಜಿಸಲಾಗಿತ್ತು. ಜಿಲ್ಲೆ ಹಾಗೂ ಹೊರ ಜಿಲ್ಲೆಯ ತಮಿಳು ಸಂಘಟನೆಯ ಪ್ರಮುಖರು ಪಾಲ್ಗೊಂಡಿದ್ದರು.
ಕಾವೇರಿ ತಮಿಳು ಸಂಘದ ಅಧ್ಯಕ್ಷ ಮೈಕಲ್, ಕಾಫಿ ಬೆಳೆಗಾರ ಡಾ.ಎ.ಸಿ.ಗಣಪತಿ, ಕೆ.ಸಿ.ಉತ್ತಪ್ಪ, ಎಂ.ಎಂ.ಕಾಳಪ್ಪ, ಗ್ರಾಮ ಪಂಚಾಯಿತಿ ಸದಸ್ಯ ನಾಸರ್, ಪಳನಿಸ್ವಾಮಿ, ರೀನಾ ತುಳಿಸಿ, ಶಿಕ್ಷಕ ಶಿವರಾಜು, ಪ್ರತೀಕ್ ಪೊನ್ನಣ್ಣ, ನಾಗರಾಜ್, ಕಣ್ಣನ್, ಕಾರ್ಯದರ್ಶಿ ಕುಮಾರ್, ಗಣೇಶ್, ಖಜಾಂಚಿ ಮುತ್ತು ವೇಲ್, ಶೇಖರ್ ಇತರರು ಇದ್ದರು.