ಪರಶುರಾಮಪುರ: ತಿಮ್ಮಣ್ಣನಾಯಕನಕೋಟೆ ಗ್ರಾಮ ಪಂಚಾಯಿತಿಯಿಂದ ಶಿಡ್ಲಯ್ಯನಕೋಟೆ ಫೀಡರ್ ಚಾನಲ್ನ ಎಡ-ಬಲ ನಾಲೆಗಳನ್ನು ದುರಸ್ತಿಗೊಳಿಸಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ಒ.ಬೈಲಪ್ಪ ತಿಳಿಸಿದರು.
ತಿಮ್ಮಣ್ಣನಾಯಕನಕೋಟೆ ಗ್ರಾಪಂ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ವೇದಾವತಿ ನದಿಯಿಂದ ಶಿಡ್ಲಯ್ಯನಕೋಟೆಯ ಫೀಡರ್ ಚಾನಲ್ ಮೂಲಕ ಪರಶುರಾಮಪುರ ಭಾಗದ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಈ ನಾಲೆಗಳಲ್ಲಿ ಕಸ, ಗಿಡ, ಗೆಂಟೆಗಳಿಂದ ತುಂಬಿತ್ತು. ಅಲ್ಲಲ್ಲಿ ಒಡೆಯಲಾಗಿತ್ತು ಎಂದರು.
ಇದನ್ನು ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಟಿ.ರಘುಮೂರ್ತಿ, ಕಾಲುವೆ ಪರಿಶೀಲಿಸಿ ಸೂಚನೆ ನೀಡಿದ್ದರು.
ಈಗ ನರೇಗಾ ಯೋಜನೆ ಅಡಿ ಮೂರ್ನಾಲ್ಕು ದಿನಗಳಿಂದ ಕೆಲಸ ಕೈಗೊಂಡು ನಾಲೆಯಲ್ಲಿದ್ದ ಹೂಳು, ಗಿಡ, ಗೆಂಟೆ ತೆರವುಗೊಳಿಸಲಾಗಿದೆ. ಇದರಿಂದ ನೀರು ಸರಾಗವಾಗಿ ಹರಿದು ಬರಲಿದೆ ಎಂದು ಹೇಳಿದರು.
ತಾಪಂ ಸದಸ್ಯ ಕರಡಪ್ಪ, ಗ್ರಾಪಂ ಸದಸ್ಯರಾದ ಭಾಗ್ಯಾ, ಗೀತಾವಾಣಿ, ಬಸವರಾಜು, ನಾಗೇಂದ್ರಪ್ಪ, ಭಾಗ್ಯಮ್ಮ, ಆರ್.ಟಿ.ನಿಂಗಣ್ಣ, ಗ್ರಾಮಸ್ಥರಾದ ರಂಗಸ್ವಾಮಿ, ಕರಿಯಣ್ಣ, ಸಣ್ಣಿಂಗಪ್ಪ, ಕಾಂತರಾಜು, ಈರಣ್ಣ, ಮಧು, ಶಿವಕುಮಾರ, ಲಕ್ಷ್ಮಣ ಇತರರಿದ್ದರು.