ಪರಶುರಾಮಪುರ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ಹೆಚ್ಚಿಸಿ ಈ ಬಾರಿಯ ಫಲಿತಾಂಶ ಉತ್ತಮಪಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಬಿಇಒ ಸಿ.ಎಸ್.ವೆಂಕಟೇಶಪ್ಪ ತಿಳಿಸಿದರು.
ಶಿಕ್ಷಣ ಇಲಾಖೆ, ಕರ್ನಾಟಕ ಪ್ರೌಢಶಿಕ್ಷಣಾ ಮಂಡಳಿ, ಉಪ ನಿರ್ದೇಶಕರ ಕಚೇರಿ, ಡಯಟ್ ವತಿಯಿಂದ ಗ್ರಾಮದ ಕರ್ನಾಟಕ ಪಬ್ಲಿಕ್ಸ್ಕೂಲ್ನಲ್ಲಿ ಹೋಬಳಿಯ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಹಾಗೂ ಸಹ ಶಿಕ್ಷಕರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಹೆಚ್ಚಳ ಕುರಿತು ಆಯೋಜಿಸಿದ್ದ ಶೈಕ್ಷಣಿಕ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು.
ಮುಖ್ಯಶಿಕ್ಷಕರು ಕಳೆದ ಬಾರಿಯ ಫಲಿತಾಂಶ ಗಮನದಲ್ಲಿಟ್ಟುಕೊಂಡು ಈ ಬಾರಿ ಸುಧಾರಣೆಗೆ ಇಲಾಖೆ ಸೂಚಿಸುವ ಎಲ್ಲ ಕ್ರಮಗಳು ಹಾಗೂ ಚಟುವಟಿಕೆಯನ್ನು ತಪ್ಪದೇ ಪಾಲಿಸಬೇಕೆಂದು ಸೂಚಿಸಿದರು.
ಶಿಕ್ಷಣಾಧಿಕಾರಿ ನರಸಿಂಹಪ್ಪ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕೈಗೊಂಡ ಚಟುವಟಿಕೆ ಕುರಿತು ಮಾಹಿತಿ ಪಡೆದರು.
ಆಂಗ್ಲ ವಿಷಯ ಪರಿವೀಕ್ಷಕ ಚಂದ್ರಣ್ಣ ಮಾತನಾಡಿ, ಜಿಲ್ಲೆ ಕಳೆದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ 6ನೇ ಸ್ಥಾನ ಪಡೆದಿತ್ತು. ಈ ಬಾರಿ ಐದರೊಳಗಿನ ಸ್ಥಾನ ಪಡೆಯಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ಇಸಿಒ ಗಿರೀಶ, ಉಪ ಪ್ರಾಚಾರ್ಯ ತುಂಗಭದ್ರಪ್ಪ, ಮುಖ್ಯಶಿಕ್ಷಕರಾದ ಹನುಂತರಾಯಪ್ಪ, ಪ್ರಶಾಂತ, ಎ.ವೀರಣ್ಣ, ಮಂಜುಳಾ, ಶಿಕ್ಷಕರಾದ ಶಿವಾನಂದ, ವೀರೇಂದ್ರ, ನರಸಿಂಹಪ್ಪ, ತಾರಾಕುಮಾರಿ, ಕೆಂಚವೀರಮ್ಮ, ಕಾಟಪ್ಪ, ದೀನನಾಥ ಇತರರಿದ್ದರು.