ಪರಶುರಾಮಪುರ: ಗ್ರಾಮದ ಎರಡು ಕೆರೆಗಳಿಗೆ ಶಿಡ್ಲಯ್ಯನಕೋಟೆ ಬ್ಯಾರೇಜ್ನಿಂದ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವಿವಿ ಸಾಗರದಿಂದ ಶಿಡ್ಲಯ್ಯನಕೋಟೆ ಬ್ಯಾರೇಜ್ಗೆ ನೀರು ಹರಿಸಲಾಗಿದ್ದು, ಅಲ್ಲಿಂದ ಎಡ-ಬಲ ನಾಲೆಗಳ ಮೂಲಕ ನೀರನ್ನು ಕೆರೆಗಳಿಗೆ ನೀರುಣಿಸುವ ಕಾರ್ಯ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿವಿ ಸಾಗರದಿಂದ ಶಿಡ್ಲಯ್ಯನಕೋಟೆ ಬ್ಯಾರೇಜ್ಗೆ ನೀರು ತುಂಬಿಸಲಾಗುತ್ತಿದೆ. ಎಡ-ಬಲ ನಾಲೆಗಳ ಮೂಲಕ ರಾಣೀಕೆರೆ, ಸೂಗೂರು, ಬುಡ್ರುಕುಂಟೆ, ಟಿಎನ್ಕೋಟೆ, ಗೋಸಿಕೆರೆ, ಚೌಳೂರು ಕೆರೆಗಳಿಗೆ ನೀರುಣಿಸುವ ಕಾರ್ಯ ನಡೆಯುತ್ತಿದೆ. ಆದ್ದರಿಂದ ಗ್ರಾಮದ ಎರಡು ಕೆರೆಗಳಿಗೆ ನೀರು ಹರಿಸಲು ಕಾಲುವೆಯಲ್ಲಿನ ಹೂಳು ತೆಗೆಸುವ ಕಾರ್ಯಕ್ಕೆ ಗ್ರಾಪಂ ಆಡಳಿತ ಮುಂದಾಗಬೇಕು ಎಂದು ಗ್ರಾಮದ ಮುಖಂಡರಾದ ಹೊರಕೇರಿ ತಿಪ್ಪೇಸ್ವಾಮಿ, ತಿಪ್ಪೇರುದ್ರಪ್ಪ, ಶಿವಲಿಂಗಪ್ಪ, ಪರಮೇಶ್ವರಪ್ಪ, ಮಾರುತಿ, ಕರಿಯಣ್ಣ, ದೇವರಾಜು, ಈರಣ್ಣ, ಚಿತ್ತಪ್ಪ, ತಿಮ್ಮಣ್ಣ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಶಿಡ್ಲಯ್ಯನಕೋಟೆ ಬ್ಯಾರೇಜ್ನಿಂದ ಆಯಾ ಗ್ರಾಮದ ಕೆರೆಗಳಿಗೆ ನೀರು ತುಂಬಿಸಲು ಸ್ಥಳೀಯ ಆಡಳಿತಗಳು ಮುಂದೆ ಬಂದಿವೆ. ಅದರಂತೆ ಪರಶುರಾಮಪುರದ ಎರಡು ಕೆರೆಗಳಿಗೆ ನೀರು ಹರಿಸುವ ಕುರಿತು ಅಧಿಕಾರಿಗಳು ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
> ಟಿ.ರಘುಮೂರ್ತಿ ಶಾಸಕ
ಕಾಲುವೆಗಳನ್ನು ಸ್ವಚ್ಛಗೊಳಿಸಿ ಗ್ರಾಮದ ಕೆರೆಗಳಿಗೆ ನೀರು ಹರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಇದರಿಂದ ಜನ, ಜಾನುವಾರುಗಳಿಗೆ ಅನುಕೂಲವಾಗಲಿದೆ.
> ಆರ್.ಕ್ಯಾತಣ್ಣ ರೈತ
ನರೇಗಾ ಯೋಜನೆಯಡಿ ಕಾಲುವೆಗಳ ದುರಸ್ತಿ ಕಾರ್ಯ ಮಾಡಿಸಲಾಗುತ್ತಿದ್ದು, ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ. ಕೆರೆಗಳಿಗೆ ನೀರು ಹರಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು.
> ಜಿ.ನಾಗರಾಜು ಪಿಡಿಒ