ಬ್ರಹ್ಮಾವರ: ಪಂಚಮಿ ಕಾನನದ ಬಳಿ ಹರಿಯುವ ಸೀತಾನದಿಯಲ್ಲಿ ನಡೆಯುವ ತೀರ್ಥ ಸ್ನಾನ ಗುರುವಾರ ಸಾಂಕೇತಿಕವಾಗಿ ನಡೆಯಿತು.
ಪ್ರತೀ ವರ್ಷ ಪಂಚಮಿ ತೀರ್ಥ ಸ್ನಾನಕ್ಕೆ ಊರ ಹಾಗೂ ಪರಊರ ಭಕ್ತರು ಬೆಳಗ್ಗೆ ಬೇಗನೆ ಬಂದು ಸೀತಾನದಿಯಲ್ಲಿ ಸ್ನಾನಮಾಡಿ ಇಲ್ಲಿನ ನೀಲರತಿ ನಾಗ ಬನದಲ್ಲಿ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸುತ್ತಾರೆ. ಈ ವರ್ಷ ಕರೊನಾ ಹಿನ್ನೆಲೆಯಲ್ಲಿ ಪರಿಸರದವರು ಮಾತ್ರ ಭಾಗವಹಿಸಿದರು.
ನೀಲಾವರ ದೇವಸ್ಥಾನದ ಜೀರ್ಣೋದ್ಧಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಎಲ್ಲ ಉತ್ಸವಗಳು ಸಾಂಕೇತಿಕವಾಗಿ ನಡೆಸಲಾಗುತ್ತಿದೆ. ಪ್ರತೀ ವರ್ಷ ಇಲ್ಲಿನ ಶ್ರೀ ಮಹಿಷ ಮರ್ದಿನಿ ದೇವರ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಪಂಚಮಿ ಕಾನನದ ತನಕ ಹೋಗಿ ಉತ್ಸವ ಮೂರ್ತಿಯನ್ನು ಸೀತಾನದಿಯಲ್ಲಿ ಸ್ನಾನ ಮಾಡಿಸುವಾಗ ಭಕ್ತರು ಅದೇ ಸಮಯದಲ್ಲಿ ಸ್ನಾನ ಮಾಡುವುದು ವಿಶೇಷ.
ಪಂಚಮಿಯಂದು ಸೀತಾನದಿಯಲ್ಲಿ ಅಂತರ್ಗತವಾಗಿ ನೂರಾರು ತೀರ್ಥಗಳು ನದಿಯಲ್ಲಿ ಹರಿದು ಬರುತ್ತದೆ, ಈ ವೇಳೆತೀರ್ಥ ಸ್ನಾನ ಮಾಡಿದರೆ ಅನೇಕ ಪಾಪಗಳು ಮತ್ತು ರೋಗಗಳು ದೂರವಾಗುತ್ತದೆ ಎನ್ನುವ ನಂಬಿಕೆ ಇದೆ.