ಭರತಭೂಮಿಯು ಪುಣ್ಯಭೂಮಿ. ಭಾರತದ ಯಾವ ಮೂಲೆಗೆ ಹೋದರೂ ಅಲ್ಲೊಂದು ತೀರ್ಥಕ್ಷೇತ್ರವಿರುತ್ತದೆ. ಪರಶಿವನ ಸಂಬಂಧವಾಗಿ ದ್ವಾದಶ ಜ್ಯೋತಿರ್ಲಿಂಗಗಳು ಇರುವುದು ನಮಗೆಲ್ಲ ತಿಳಿದೇ ಇದೆ. ಅದರ ಜೊತೆಜೊತೆಗೆ ಹಿಮಾಲಯದ ಪ್ರದೇಶದಲ್ಲಿ ಕೇದಾರ ಹಾಗೂ ಬದರೀಕ್ಷೇತ್ರಗಳ ಮಧ್ಯದಲ್ಲಿ ಪಂಚಕೇದಾರ ಎಂಬ ಐದು ತೀರ್ಥಸ್ಥಾನಗಳಲ್ಲಿವೆ. ಅವು ಕೇದಾರ, ತುಂಗನಾಥ, ರುದ್ರನಾಥ, ಮಧ್ಯಮಹೇಶ್ವರ, ಕಲ್ಪೇಶ್ವರ ಎಂಬ ಪಂಚ ಕೇದಾರಗಳಿವೆ.
ಕುರುಕ್ಷೇತ್ರ ಯುದ್ಧದ ನಂತರ ಪಾಂಡವರು ಶಿವನ ದರ್ಶನ ಮಾಡಿ ಪಾಪಪರಿಹಾರ ಮಾಡಿಕೊಳ್ಳೋಣ ಎಂದು ಕೇದಾರಕ್ಷೇತ್ರಕ್ಕೆ ಬಂದರು. ಆದರೆ ಎಷ್ಟು ಹುಡುಕಿದರೂ ಅಲ್ಲಿ ಶಿವನು ಸಿಗಲಿಲ್ಲ. ಧರ್ಮರಾಯ ಹಾಗೂ ಇತರ ಪಾಂಡವರಿಗೆ ದುಃಖವಾಯಿತು. ಕಂಬನಿಗರೆಯುತ್ತ ಪಾಂಡವರು, ‘ಮಹಾದೇವ, ನಮ್ಮಿಂದ ಏನಾದರೂ ಅಪಚಾರವಾಗಿದೆಯೆ? ನಾವೇನಾದರೂ ಪಾಪವನ್ನು ಎಸಗಿದ್ದೇವೆಯೇ? ಅನೇಕ ಕಷ್ಟ, ತೊಂದರೆ, ಅಪಮಾನಗಳನ್ನು ಸಹಿಸಿಕೊಂಡು, ಬೇರೆ ದಾರಿ ಕಾಣದೆ ಯುದ್ಧ ಮಾಡಿ ನಮ್ಮ ರಾಜ್ಯವನ್ನು ಪಡೆಯಬೇಕಾಯಿತು. ಈಗ ನೀನೂ ನಮ್ಮ ಕೈ ಬಿಡುತ್ತಿರುವೆಯಾ?’ ಎಂದು ಪ್ರಾರ್ಥಿಸಿದರು. ಪ್ರಾರ್ಥನೆಯ ಫಲವೆಂಬಂತೆ ಶಿವನು ಮಾಯಾಶಕ್ತಿಯಿಂದ ಎತ್ತಿನ ರೂಪದಲ್ಲಿ ಓಡಾಡುತ್ತಿರುವುದನ್ನು ತಿಳಿದರು. ಪಾಂಡವರು ಅದನ್ನು ಹಿಡಿಯಲು ಹೋದರು. ಎತ್ತಿನ ಬಾಲವನ್ನು ಹಿಡಿದು ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ಪ್ರಾರ್ಥಿಸತೊಡಗಿದರು. ಶಿವನು ಅನುಗ್ರಹಾರ್ಥ ಆ ನಯಪಾಲವೆಂಬ ಶಿಖರ ಹೊಕ್ಕು ಲಿಂಗರೂಪದಲ್ಲಿ ದರ್ಶನವಿತ್ತನು. ಪಾಂಡವರು ಸಂತೋಷಗೊಂಡು, ಶಿವನನ್ನು ಅರ್ಚಿಸಿದರು.
ಅದರ ಬೆನ್ನಿನ ಮೇಲುಭಾಗವೇ ಕೇದಾರೇಶ್ವರ. ಮುಂದಿನ ಕಾಲುಗಳು ತುಂಗನಾಥದಲ್ಲಿ, ಮುಖವು ರುದ್ರನಾಥದಲ್ಲಿ, ಹೊಟ್ಟೆಯ ಭಾಗವು ಮಧ್ಯ ಮಹೇಶ್ವರದಲ್ಲಿ, ಜಟೆ ಕಲ್ಪೇಶ್ವರದಲ್ಲಿ ಲಿಂಗರೂಪದಲ್ಲಿ ಆವಿರ್ಭವಿಸಿತು. ಯಾತ್ರಾರ್ಥಿಗಳು ಈ ಪಂಚ ಕೇದಾರವನ್ನು ದರ್ಶಿಸಿ, ಅರ್ಚಿಸಿ, ಪುನೀತರಾಗುವರು.