ಶಿವಮೊಗ್ಗ: ಜಗದ್ಗುರು ಶ್ರೀ ಪಂಚಾಚಾರ್ಯರು ಕೇವಲ ವೀರಶೈವ ಧರ್ಮದ ಒಳಿತಿಗೆ ಪ್ರಯತ್ನಿಸಲಿಲ್ಲ. ಬದಲಾಗಿ ಇಡೀ ವಿಶ್ವದಲ್ಲೇ ಶಾಂತಿ ನೆಲೆಸಲು ಕಾರಣೀಭೂತರಾದರು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಬಣ್ಣಿಸಿದರು.
ವೀರಶೈವ ಕಲ್ಯಾಣ ಮಂದಿರದಲ್ಲಿ ಗುರುವಾರ ಶಿವಮೊಗ್ಗ ಜಿಲ್ಲಾ ಬೇಡ ಜಂಗಮ ಸಮಾಜದಿಂದ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಮತ್ತು ಸಮಾಜದ ಪ್ರಥಮ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಇಂದು ಶಾಂತಿಯ ದಿಕ್ಕಿನಲ್ಲಿ ಸಾಗಲು ಭಾರತದ ಸಾಧು-ಸಂತರು ಕೊಡುಗೆ ಅಪಾರ ಎಂಬುದು ಮರೆಯುವಂತಿಲ್ಲ ಎಂದರು.
ಸಮಾಜದಲ್ಲಿ ಅನೇಕ ಹಿರಿಯರು, ಸಾಧು-ಸಂತರಿಂದ ಶಾಂತಿ ನೆಲೆಸುತ್ತಿದೆ. ವಿವಿಧ ಮಹಾನೀಯರು ತಮ್ಮ ವೈಯಕ್ತಿಕ ಜೀವನಕ್ಕೆ ತೊಂದರೆ ಆದರೂ ಅದನ್ನಲ್ಲವನ್ನೂ ಬದಿಗಿಟ್ಟು ಸಮಾಜದ ಏಳಿಗೆಗಾಗಿ ಶಾಂತಿಮಂತ್ರ ಜಪಿಸುತ್ತಿದ್ದರು. ಮಹಾನೀಯರ ಪ್ರಯತ್ನದಿಂದ ವಿಶ್ವದಲ್ಲೇ ಶಾಂತಿ ನೆಲೆಸಿದೆ ಎಂದು ಹೇಳಿದರು.
ಗುರುತಿನ ಕಾರ್ಡ್ಗಳನ್ನು ವಿತರಿಸಿ ಮಾತನಾಡಿದ ಎಂಎಲ್ಸಿ ಆಯನೂರು ಮಂಜುನಾಥ, ಅವತಾರ ಪುರುಷರು ಯಾವುದೋ ಒಂದು ಯುಗಕ್ಕೆ ಸೀಮಿತವಾಗಿರುತ್ತಾರೆ. ಆದರೆ ಶ್ರೀ ಪಂಚಾಚಾರ್ಯರು ಯುಗ ಯುಗಗಳಲ್ಲೂ ನೆಲೆಸಿದ್ದರು. ಹಾಗಾಗಿ ಅವರನ್ನು ಯಾವುದೋ ಒಂದು ಯುಗಕ್ಕೆ ಸೀಮಿತಗೊಳಿಸುವಂತಿಲ್ಲ. ಸಾಧು ಸಂತರು, ಋಷಿ ಮುನಿಗಳನ್ನೂ ಮೀರಿದವರು ಪಂಚಾಚಾರ್ಯರು ಎಂದರು.
ಸಮಾಜದ ಜಿಲ್ಲಾ ಉಪಾಧ್ಯಕ್ಷ ಅಡವೀಶಯ್ಯ ಪ್ರಸ್ತಾವಿಕ ಮಾತನಾಡಿದರು. ತರೀಕೆರೆ ಹಿರೇಮಠದ ಶ್ರೀ ಜಗದೀಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜದ ಅಧ್ಯಕ್ಷ ಎಚ್.ಮಲ್ಲಿಕಾರ್ಜುನ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕೊಟ್ಟುರೇಶ್ವರ ಆಸ್ಪತ್ರೆ ಮಾಲೀಕ ಡಾ. ಕೊಟ್ಟುರೇಶ್ವರ ರಾಸ್ತಾಪುರಮಠ, ಶ್ರೀ ಬಸವೇಶ್ವರ ವೀರಶೈವ ಸೇವಾ ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಸಮಾಜದ ಕಾರ್ಯದರ್ಶಿ ಕೆ.ಆರ್.ಸೋಮನಾಥ, ಉಪಾಧ್ಯಕ್ಷೆ ಎಂ.ಇ.ಸುಜಯಾ ಪ್ರಸಾದ್, ಮಹಿಳಾ ಅಧ್ಯಕ್ಷೆ ಸುನಂದಾ ಎಂ ವಿಜಯಕುಮಾರ್, ಕಾರ್ಯದರ್ಶಿ ಜ್ಯೋತಿ ನಾಗರಾಜಯ್ಯ, ಖಜಾಂಚಿ ಉಮೇಶ್ ಹಿರೇಮಠ ಉಪಸ್ಥಿತರಿದ್ದರು.