ನವದೆಹಲಿ: ಅಫ್ಘಾನಿಸ್ತಾನದ ಮರುನಿರ್ಮಾಣ ಕಾರ್ಯದಲ್ಲಿ ಶ್ರಮಿಸುತ್ತಿರುವ ಭಾರತೀಯ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿರುವ ವೇಣು ಮಾಧವ್ ಡೋಂಗ್ರಾ ಅವರನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಹುನ್ನಾರ ನಡೆಸಿದ್ದ ಪಾಕಿಸ್ತಾನ ಮುಖಭಂಗ ಅನುಭವಿಸಿದೆ.
ಡೋಂಗ್ರಾ ತನ್ನ ನೆಲದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ಎಸಗಲು ಪ್ರಚೋದನೆ ನೀಡಿದ್ದಲ್ಲದೆ, ಸಂಚಿನಲ್ಲಿ ಭಾಗಿಯಾಗಿದ್ದರು ಎಂಬುದು ಪಾಕಿಸ್ತಾನದ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಅದು ಡೋಂಗ್ರಾ ಅವರನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಕೋರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ (ಯುಎನ್ಎಸ್ಸಿ) ಮನವಿ ಮಾಡಿಕೊಂಡಿತ್ತು. ಆದರೆ, ಪಾಕ್ನ ಈ ಪ್ರಯತ್ನಕ್ಕೆ ಅಮೆರಿಕ ಅಡ್ಡಗಾಲು ಹಾಕಿದೆ.
ತನ್ನ ನೆಲವನ್ನು ಸುರಕ್ಷಿತ ಅಡಗುದಾಣವನ್ನಾಗಿಸಿಕೊಂಡು, ಜಮ್ಮು ಮತ್ತು ಕಾಶ್ಮೀರ ಸೇರಿ ಭಾರತದ ವಿವಿಧ ಭಾಗಗಳಲ್ಲಿ ಹಿಂಸಾ ಕೃತ್ಯಗಳನ್ನು ಎಸಗಲು ಪ್ರಚೋದನೆ ನೀಡಿ, ಸಂಚು ರೂಪಿಸುವ ಜತೆಗೆ ಅಗತ್ಯ ಸಹಕಾರ ನೀಡುತ್ತಿರುವ ಆರೋಪದಲ್ಲಿ ಜೈಷ್ ಎ ಮೊಹಮ್ಮದ್ನ ಪ್ರಮುಖ ಉಗ್ರ ಮಸೂದ್ ಅಜರ್ನನ್ನು ಯುಎನ್ಎಸ್ಸಿ ಜಾಗತಿಕ ಉಗ್ರನೆಂದು ಘೋಷಿಸುವಂತೆ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಜತೆಗೆ ನೈತಿಕ ಮೇಲುಗೈ ಸಾಧಿಸುವ ಉದ್ದೇಶದಿಂದ ಪಾಕಿಸ್ತಾನ ಡೋಂಗ್ರಾ ಅವರನ್ನು ಜಾಗತಿಕ ಉಗ್ರನೆಂದು ಯುಎನ್ಎಸ್ಸಿ ಘೋಷಿಸುವಂತೆ ಮಾಡಲು ಹುನ್ನಾರ ನಡೆಸಿತ್ತು. ಇದಕ್ಕೆ ಚೀನಾ ಒತ್ತಾಸೆಯಾಗಿ ನಿಂತಿತ್ತು ಎನ್ನಲಾಗಿದೆ.
ಇದನ್ನೂ ಓದಿ: ಪತಂಜಲಿಯಿಂದ “ಕರೊನಿಲ್” ಔಷಧ ಬಿಡುಗಡೆ: ನೂರಕ್ಕೆ ನೂರು ಗುಣಪಡಿಸುವ ಭರವಸೆ!
ಪಾಕಿಸ್ತಾನದ ಪ್ರಕಾರ ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಡೋಂಗ್ರಾ ಹಾಗೂ ಮೂವರು ಸಹಚರರು ಪಾಕಿಸ್ತಾನದಲ್ಲಿ ನಿರಂತರವಾಗಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬುದು ಪಾಕಿಸ್ತಾನದ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಅದು ಕಳೆದ ವರ್ಷದ ಸೆಪ್ಟೆಂಬರ್ನಲ್ಲೇ ಡೋಂಗ್ರಾ ಅವರನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಆಗ್ರಹಿಸಿ ಯುಎನ್ಎಸ್ಸಿಯ 1267 ಅನುಮೋದನಾ ಸಮಿತಿಗೆ ಗೆ ಮನವಿ ಸಲ್ಲಿಸಿತ್ತು.
ಆದರೆ, ಡೋಂಗ್ರಾ ಅವರು ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬುದನ್ನು ಇನ್ನೂ ಹೆಚ್ಚಿನ ಸಾಕ್ಷ್ಯಗಳನ್ನು ಒದಗಿಸುವಂತೆ ಸೂಚಿಸಿದ್ದ ಅಮೆರಿಕ ಈ ಮನವಿಯನ್ನು ಯುಎನ್ಎಸ್ಸಿ ತಡೆಹಿಡಿಯುವಂತೆ ಮಾಡಿತ್ತು. ಆದರೆ, ಇದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ಪಾಕಿಸ್ತಾನ ವಿಫಲವಾಗಿದೆ. ಆದರೂ, ತನ್ನ ಮನವಿಯನ್ನು ಪುರಸ್ಕರಿಸಬೇಕು ಎಂದು ಯುಎನ್ಎಸ್ಸಿಯ ಅನುಮೋದನಾ ಸಮಿತಿಯ ಮೇಲೆ ಪಾಕ್ ಒತ್ತಡ ಹೇರಲಾರಂಭಿಸಿತ್ತು. ಆದರೆ, ಇದಕ್ಕೆ ಅಮೆರಿಕ ಭಾರಿ ಪ್ರತಿರೋಧ ಒಡ್ಡಿದ್ದರಿಂದ, ಪಾಕ್ನ ಮನವಿ ತಿರಸ್ಕೃತಗೊಂಡಿತು.
ಇಷ್ಟಾದರೂ ಸುಮ್ಮನಾಗದ ಪಾಕಿಸ್ತಾನ ಡೋಂಗ್ರಾ ಅವರನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಮಾಡುವ ತನ್ನ ಪ್ರಯತ್ನವನ್ನು ಜಾರಿಯಲ್ಲಿಟ್ಟಿದೆ. ಅಲ್ಲದೆ, ಈ ಕುರಿತು ಯುಎನ್ಎಸ್ಸಿಗೆ ಹೊಸದಾಗಿ ಮನವಿ ಸಲ್ಲಿಸಲು ಸಿದ್ಧತೆಯಲ್ಲಿ ತೊಡಗಿದೆ ಎನ್ನಲಾಗಿದೆ.
ಮರ್ಯಾದೆ ಹತ್ಯೆ ಆಧಾರಿತ ಚಿತ್ರವನ್ನು ಬೇರೆ ರೀತಿ ಬಿಂಬಿಸಲು ಹೊರಟ ಆರ್ಜಿವಿ ವಿರುದ್ಧ ಆಕ್ರೋಶ!