ಜೋಧ್ಪುರ: ಈ ವರ್ಷದಲ್ಲಿ ನಡೆಯಲಿರೋ ಬೋರ್ಡ್ ಪರೀಕ್ಷೆ ಬರೆಯಬೇಕಾದರೆ ಅರ್ಹತಾ ಪ್ರಮಾಣಪತ್ರ ನೀಡುವಂತೆ ಪಾಕ್ ಮೂಲದ ಹಿಂದು ನಿರಾಶ್ರಿತಳಿಗೆ ರಾಜಸ್ಥಾನದ ಪ್ರೌಢಶಿಕ್ಷಣ ಮಂಡಳಿ ಕೇಳಿದ್ದು, ಪರೀಕ್ಷೆ ಬರೆಯಲು ನಿರಾಕರಿಸಿರುವ ಆರೋಪ ಕೇಳಿಬಂದಿದೆ.
ಆದಾಗ್ಯು, ರಾಜಸ್ಥಾನದ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೊತಸರಾ ಅವರು ಈ ಕುರಿತು ಮಾತನಾಡಿ, ಸರ್ಕಾರ ನಿಯಮ ಬದಲಾವಣೆ ಮಾಡಿದರೂ ಸರಿಯೇ ನಿರಾಶ್ರಿತಳಿಗೆ ಪರೀಕ್ಷೆ ಬರೆಯಲು ಅನುಮತಿ ನೀಡುವುದಾಗಿ ಭರವಸೆ ನೀಡಿದ್ದಾರೆ.
ಅಂದಹಾಗೆ ಪರೀಕ್ಷೆ ಬರೆಯಲು ಇಚ್ಛೆ ಹೊಂದಿರುವ ಪಾಕ್ ಮೂಲದ ಹಿಂದು ನಿರಾಶ್ರಿತೆ ಹೆಸರು ದಾಮಿ ಕೊಹ್ಲಿ. ಕೆಲ ವರ್ಷಗಳ ಹಿಂದೆ ಪಾಕಿಸ್ತಾನದ ಸಿಂಧ್ ಪ್ರದೇಶದಿಂದ ಭಾರತಕ್ಕೆ ಬಂದಿದ್ದಾರೆ. ಧಾರ್ಮಿಕ ಶೋಷಣೆಗೆ ಒಳಗಾಗಿದ್ದರಿಂದ ಇಲ್ಲಿಗೆ ವಲಸೆ ಬಂದಿದ್ದಾರೆ. ದಾಮಿ ಪಾಕಿಸ್ತಾನದಲ್ಲಿ 10ನೇ ತರಗತಿಯವರೆಗೂ ಓದಿದ್ದಾರೆ.
ಸದ್ಯ ದಾಮಿ ರಾಜಸ್ಥಾನದ ಜೋಧ್ಪುರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಅಂಗಾನ್ವ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಿದ್ದಾರೆ. 2018ರಲ್ಲಿ ನಾನು ಶಾಲೆಯಲ್ಲಿ ಪ್ರವೇಶ ಪಡೆದೆ. ಇಡೀ ವರ್ಷ ಅಧ್ಯಯನ ಮಾಡಿ 11ನೇ ತರಗತಿ ಪಾಸ್ ಮಾಡಿದೆ. ಅದರ ಅಂಕಪಟ್ಟಿಯನ್ನು ಹೊಂದಿದ್ದೇನೆ. ಬೋರ್ಡ್ ಪರೀಕ್ಷಗೆ ಕೇವಲ ಒಂದು ತಿಂಗಳು ಬಾಕಿ ಇದೆ. ಹೀಗಿರುವಾಗ ಶಾಲೆಯಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡುವುದಿಲ್ಲ ಎಂದು ನನಗೆ ನೋಟಿಸ್ ನೀಡಿದೆ. ನಾನು ಎಲ್ಲ ರೀತಿಯ ಸಾಕ್ಷ್ಯಾಧಾರಗಳನ್ನು ನೀಡಿದ್ದೇನೆ. ಅಲ್ಲದೆ, ನಾನು ಸರಿಯಾದ ಶಿಕ್ಷಣವನ್ನೂ ಪಡೆದುಕೊಂಡಿದ್ದೇನೆ ಎಂದು ದಾಮಿ ಕೊಹ್ಲಿ ಅಳಲು ತೊಡಿಕೊಂಡಿದ್ದಾರೆ.
ಈ ಬಗ್ಗೆ ಸಚಿವ ದೊತಸರಾ ಮಾತನಾಡಿ, ಆಕೆ ಪಾಕಿಸ್ತಾನದಲ್ಲಿ 10ನೇ ತರಗತಿ ಪೂರ್ಣಗೊಳಿಸಿದ್ದಾಳೆ. ಸದ್ಯ ರಾಜಸ್ಥಾನದಲ್ಲಿ 12ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯಲು ಇಚ್ಛಿಸಿದ್ದಾಳೆ. ಪಾಕಿಸ್ತಾನ ಸಿಲಾಬಸ್ ಬಗ್ಗೆ ಮಾಹಿತಿ ತಿಳಿಯಲು ರಾಯಭಾರಿ ಕಚೇರಿಗೆ ಪತ್ರ ಬರೆದಿದ್ದೇನೆ. ಅವರ ಸಿಲಬಸ್ನೊಂದಿಗೆ ನಮ್ಮ ಸಿಲಬಸ್ ಹೋಲಿಕೆ ಮಾಡಲಾಗುತ್ತದೆ. ಒಂದು ವೇಳೆ ಪಾಕಿಸ್ತಾನಿ ರಾಯಭಾರಿ ಕಚೇರಿಯಿಂದ ಒಳ್ಳೆಯ ಸ್ಪಂದನೆ ಸಿಕ್ಕಿದಲ್ಲಿ, ಆಕೆಗೆ ಖಂಡಿತವಾಗಿಯೂ ಪರೀಕ್ಷೆ ಬರೆಯಲು ಅನುಮತಿ ನೀಡುತ್ತೇವೆ. ಒಂದು ವೇಳೆ ಒಳ್ಳೆಯ ಸ್ಪಂದನೆ ಸಿಗದಿದ್ದಲ್ಲಿ ನಿಯಮ ಬದಲಾವಣೆ ಮಾಡಿಯಾದರೂ ಅವಳಿಗೆ ಅನುಮತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ 10ನೇ ತರಗತಿ ಪೂರ್ಣಗೊಳಿಸಿದ್ದ ಕಾರಣದಿಂದಾದಿ ರಾಜಸ್ಥಾನ ಶಿಕ್ಷಣ ಮಂಡಳಿ ದಾಮಿ ಕೊಹ್ಲಿಯನ್ನು ನಿರಾಕರಿಸಿದೆ. ಆದರೆ, ಅಲ್ಲಿನ ಕಾಂಗ್ರೆಸ್ ಸರ್ಕಾರ ಆಕೆಯ ಪರ ಮೃದು ಧೋರಣೆ ಹೊಂದಿದ್ದು, ಬೆನ್ನಿಗೆ ನಿಂತಿದೆ. (ಏಜೆನ್ಸೀಸ್)