ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿನ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಅಪಹರಿಸಿ, ಅಕ್ರಮ ಬಂಧನದಲ್ಲಿರಿಸಿ ನಂತರ ಬಿಡುಗಡೆ ಮಾಡಿರುವ ಪಾಕಿಸ್ತಾನ, ಅವರಿಬ್ಬರ ವಿರುದ್ಧ ಅಜ್ಜಿ ಕಥೆ ಕಟ್ಟಿ, ಸುಳ್ಳು ಎಫ್ಐಆರ್ ದಾಖಲಿಸಿದೆ.
ಈ ಎಫ್ಐಆರ್ ಪ್ರಕಾರ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಕಾರ್ಯನಿಮಿತ್ತ ಪ್ರಯಾಣಿಸುತ್ತಿದ್ದ ಬಿಎಂಡಬ್ಲ್ಯು 8ಎಲ್-104 ಕಾರನ್ನು ಅತಿವೇಗವಾಗಿ ನಿರ್ಲಕ್ಷ್ಯದಿಂದ ಚಲಾಯಿಸಿ, ಪಾದಚಾರಿಗಳ ಮೇಲೆ ನುಗ್ಗಿಸಿದ್ದರಿಂದ, ಒಬ್ಬ ಪಾದಚಾರಿಗೆ ಗಂಭೀರವಾಗಿ ಗಾಯಗಳಾಗಿರುವುದಾಗಿ ಹೇಳಲಾಗಿದೆ. ಅಲ್ಲದೆ, ಆ ಕಾರಿನಲ್ಲಿದ್ದ ಒಬ್ಬ ನೌಕರರ ಬಳಿ 10 ಸಾವಿರ ಪಾಕಿಸ್ತಾನಿ ರೂಪಾಯಿ (4,600 ರೂ.) ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿರುವುದಾಗಿ ತಿಳಿಸಲಾಗಿದೆ.
ಆದರೆ ವಿಯೆನ್ನಾ ಶೃಂಗಸಭೆಯ ನಿರ್ಣಯದಂತೆ ರಾಯಭಾರ ಕಚೇರಿ ಸಿಬ್ಬಂದಿ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸುವಂತಿಲ್ಲ. ಹಾಗೂ ಅವರು ಕ್ಷಮಾರ್ಹರು ಆಗಿರುವ ಕಾರಣ ಅವರಿಬ್ಬರನ್ನೂ ಬಿಟ್ಟು ಕಳುಹಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿದೆ.
ಶತ್ರು ರಾಷ್ಟ್ರದ ರಾಯಭಾರಿ ಕಚೇರಿ ಸಿಬ್ಬಂದಿಗೆ ಕಿರುಕುಳ ನೀಡುವ ಉದ್ದೇಶದಿಂದ ಇಂಥ ಸುಳ್ಳು ಆರೋಪಗಳನ್ನು ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಇಲ್ಲಿ ಕೂಡ ಪಾಕಿಸ್ತಾನ ಅದನ್ನೇ ಮಾಡಿದೆ.
ಇದನ್ನೂ ಓದಿ: ಅನಿಲ್ ಅಂಬಾನಿಗೆ ಮತ್ತೊಂದು ಸಂಕಷ್ಟ; 1,200 ಕೋಟಿ ರೂ. ಸಾಲ ವಸೂಲಿಗೆ ಸಜ್ಜಾದ ಎಸ್ಬಿಐ
ಭಾರತೀಯ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿ ಕಾರ್ಯನಿಮಿತ್ತ ಬೆಳಗ್ಗೆ 8 ಗಂಟೆಗೆ ಕಚೇರಿಯಿಂದ ಹೊರಟಿದ್ದರು. ಆದರೆ, ಗುದ್ದೋಡಲು ಪ್ರಯತ್ನಿಸಿದ್ದಾರೆ ಎಂಬ ಎಫ್ಐಆರ್ ಅನ್ನು ಮಧ್ಯಾಹ್ನ 2.05 ನಿಮಿಷಕ್ಕೆ ದಾಖಲಿಸಲಾಗಿದೆ. ಅಂದರೆ, ಅಪಘಾತ ನಡೆದಿದೆ ಎನ್ನಲಾದ ಆರು ತಾಸಿನ ಬಳಿಕ ಎಫ್ಐಆರ್ ದಾಖಲಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಕಾರು ಗುದ್ದಿದ್ದರಿಂದ ಒಬ್ಬ ಪಾದಚಾರಿಗೆ ಗಂಭೀರ ಗಾಯಗಳಾಗಿವೆ. ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ. ಆದರೆ, ಎಲ್ಲಿಯೂ ಕೂಡ ಗಾಯಾಳುವಿನ ಹೆಸರಾಗಲಿ, ವಿಳಾಸವಾಗಲಿ ನಮೂದಿಸಲಾಗಿಲ್ಲ. ಇದೆಲ್ಲವನ್ನೂ ಗಮನಿಸಿದಾಗ ಪಾಕಿಸ್ತಾನ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿಗೆ ಕಿರುಕುಳ ನೀಡಲೆಂದೇ ಸುಳ್ಳು ಆರೋಪಗಳನ್ನು ಹೊರಿಸಿ, ಎಫ್ಐಆರ್ ದಾಖಲಿಸಿದೆ ಎಂಬುದು ಸ್ಪಷ್ಟವಾಗುತ್ತದೆ.
ನಟ ಸುಶಾಂತ್ ಸಿಂಗ್ ರಜಪೂತ್ ಅಂತ್ಯಕ್ರಿಯೆ ಬೆನ್ನಲ್ಲೇ ಅತ್ತಿಗೆ ಸಾವು