ಗೋಕರ್ಣ: ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಮತ್ತು ಗಾಳಿಯಿಂದಾಗಿ ಈ ಭಾಗದ ವಿವಿಧೆಡೆಗಳಲ್ಲಿ ಅವಘಡಗಳು ಉಂಟಾಗಿವೆ. ಸಮುದ್ರಕ್ಕೆ ಹೊಂದಿಕೊಂಡಿರುವ ಇಲ್ಲಿನ ತಾರಮಕ್ಕಿ ಮತ್ತು ಬೇಲೆಗದ್ದೆ ಭಾಗಗಳಲ್ಲಿನ ಹಳ್ಳಗಳು ಹೂಳಿನಿಂದ ತುಂಬಿಕೊಂಡಿದೆ. ಇದರಿಂದಾಗಿ ಮಮಳೆ ನೀರು ಸಮುದ್ರ ಸೇರಲಾಗದೆ ನೂರಾರು ಎಕರೆ ಭತ್ತದ ಗದ್ದೆಗಳು ಜಲಾವೃತವಾಗಿವೆ.ಪ್ರವಾಹದ ಈ ನೀರು ಹೊರ ಹೋಗಲು ಇನ್ನೂ ಕೆಲ ವಾರಗಳು ಬೇಕಾಗಿರುವುದರಿಂದ ರೈತರು ಕೃಷಿ ಕೆಲಸಕ್ಕೆ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲಾಗದೆ ತೊಂದರೆಗೆ ಸಿಲುಕಿದ್ದಾರೆ. ಗುರುವಾರದ ಮಳೆ-ಗಾಳಿಗೆ ತಾರಮಕ್ಕಿಯ ಮಾಣೇಶ್ವರ ಹುಲಿಯಪ್ಪ ಗೌಡ ಹೊನ್ನುಮನೆ ಎನ್ನುವವರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಶ್ರೀ ಮಹಾಬಲೇಶ್ವರ ಮಂದಿರದ ಅಮೃತಾನ್ನ ಭೋಜನ ಶಾಲೆ ಮೇಲೆ ಮರ ಬಿದ್ದು ಛಾವಣಿ ಸಂಪೂರ್ಣವಾಗಿ ನಾಶವಾಗಿದೆ. ಇದೇ ರೀತಿ ಇಲ್ಲಿನ ಅರಣ್ಯ ಇಲಾಖೆಯ ಉರುವಲು ಕಟ್ಟಿಗೆ ಡಿಪೋದಲ್ಲಿ ಮರಗಳು ನೆಲಕ್ಕುರುಳಿವೆ. ಸತತ ಮಳೆಯಿಂದಾಗಿ ತಗ್ಗು ಪ್ರದೇಶ ಹಾಗೂ ರಸ್ತೆಗಳಲ್ಲಿ ನೀರು ತುಂಬಿ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ.