ಹುಬ್ಬಳ್ಳಿ: ಕಾಂಗ್ರೆಸ್, ಬಿಜೆಪಿ ಅಷ್ಟೇ ಅಲ್ಲ ಎಲ್ಲ ಪಕ್ಷಗಳ ಮುಖಂಡರು ನಮ್ಮ ಸಂಪರ್ಕದಲ್ಲಿದ್ದಾರೆ. ಚುನಾವಣೆಗೆ ಸ್ಪರ್ಧೆ ಮಾಡಬೇಕೆಂಬುದು ಭಕ್ತರ ಅನಿಸಿಕೆಯಾಗಿದೆ. ಇದರ ಸಾಧಕ ಬಾಧಕಗಳ ಬಗ್ಗೆ ಚಿಂತನ ಮಂಥನ ಮಾಡಿದ ನಂತರ ಬೆಂಗಳೂರಿನಲ್ಲಿ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, -ನಮ್ಮ ಹಿಂದೆ ಬಹಳಷ್ಟು ಜನರಿದ್ದಾರೆ. ಅವರ ಹೆಸರು ಈಗಲೇ ಬಹಿರಂಗ ಪಡಿಸುವುದಿಲ್ಲ. ನಾಡಿನ ಮಠಾಧೀಶರ ಮೇಲೆ ಯಾವ ರೀತಿ ಒತ್ತಡ ತರಲಾಗುತ್ತಿದೆ ಎಂಬುದನ್ನು ಈಗಾಗಲೇ ಒಬ್ಬ ಮಠಾಧೀಶರು ಬಹಿರಂಗ ಪಡಿಸಿದ್ದಾರೆ. ಧಾರವಾಡ ಕ್ಷೇತ್ರದಲ್ಲಿ ಪ್ರಲ್ಹಾದ ಜೋಶಿ ಅವರನ್ನು ಬದಲಿಸಬೇಕೆಂಬ ನಮ್ಮ ನಿಲುವಿನಲ್ಲಿ ಈಗಲೂ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಚುನಾವಣೆಗೆ ಸ್ಪಧಿರ್ಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಸ್ಪರ್ಧೆ ಮಾಡಬೇಕೆಂಬುದು ಮಠಾಧೀಶರು, ಭಕ್ತರ ಇಚ್ಚೆಯಾಗಿದೆ. ಇದೆಲ್ಲಕ್ಕೂ ಶ್ರೀವೇ ಬೆಂಗಳೂರಿನಲ್ಲಿ ಉತ್ತರ ನೀಡುತ್ತೇವೆ ಎಂದರು.
ಉತ್ತರ ಭಾರತದಲ್ಲಿ ಅನೇಕ ಸಂನ್ಯಾಸಿಗಳು ರಾಜಕೀಯ ಪ್ರವೇಶ ಮಾಡಿ ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸುತ್ತಿದ್ದಾರೆ. ಅದನ್ನು ನೋಡುತ್ತಿರುವ ಭಕ್ತರು ಇಲ್ಲಿಯೂ ನಮ್ಮಂಥ ಸ್ವಾಮೀಜಿಗಳು ರಾಜಕೀಯಕ್ಕೆ ಬರಬೇಕೆಂದು ಕೇಳಿಕೊಳ್ಳುತ್ತಿದ್ದಾರೆ. ಇದೀಗ ನಾವು ತೆಗೆದುಕೊಳ್ಳುವ ನಿರ್ಧಾರ ಧಾರವಾಡ ಜಿಲ್ಲೆಗೆ ಮಾತ್ರ ಸೀಮಿತವಾಗದೇ ರಾಜ್ಯ, ರಾಷ್ಟ್ರದಲ್ಲಿ ಪರಿಣಾಮ ಉಂಟು ಮಾಡಲಿದೆ ಎಂದು ಸ್ವಾಮೀಜಿ ಹೇಳಿದರು.