ವಿರಾಜಪೇಟೆ: ಸಮಾಜ ಕಲ್ಯಾಣ, ವ್ಯಕ್ತಿ ವಿಕಸನ ಮತ್ತು ಸದೃಢ ಸಮಾಜ ನಿರ್ಮಾಣ ಮಾಡಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಉತ್ತಮ ಸ್ವಯಂ ಸೇವಕರನ್ನು ಸಮಾಜಕ್ಕೆ ನೀಡುತ್ತಾ ಬಂದಿದೆ ಎಂದು ಆರ್ಎಸ್ಎಸ್ ಜಿಲ್ಲಾ ಸಂಪರ್ಕ ಪ್ರಮುಖ್ ಅರುಣ್ಕುಮಾರ್ ಹೇಳಿದರು.
ಆರ್ಎಸ್ಎಸ್ ವಿರಾಜಪೇಟೆ ನಗರ ಶಾಖೆಯು ನಗರದ ದೇವಾಂಗ ಬೀದಿಯಲ್ಲಿರುವ ದೇವಾಲಯ ಆವರಣದಲ್ಲಿ ಆಯೋಜಿಸಿಲಾಗಿದ್ದ ಶಾಖಾ ವಾರ್ಷಿಕೋತ್ಸವ ದಿನಾಚರಣೆ ಪ್ರಾಮುಖ್ಯತೆ ಬಗ್ಗೆ ವಿಷಯ ಮಂಡಿಸಿ ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘಟನಾತ್ಮಕ ಕಾರ್ಯಗಳು ಶಾಖೆ ಮೂಲಕವೇ ನಡೆಯುತ್ತದೆ ಎಂದರು.
ಸ್ವಯಂ ಸೇವಕರಿಗೆ ರಾಷ್ಟ್ರ ಭಕ್ತಿ, ಮೌಲ್ಯಯುತವಾದ ಜೀವನ ಸಾಗಿಸುವ ವಿಧಾನ, ಶಾರೀರಿಕ ವ್ಯಾಯಾಮಗಳು, ತುರ್ತು ಸಂದರ್ಭ ಎದುರಿಸುವ ವಿಧಾನಗಳು, ಸ್ವಚ್ಛತೆ ಬಗ್ಗೆ ತಿಳಿವಳಿಕೆ, ದೇಶಭಕ್ತಿ ಗಾಯನ ಹೀಗೆ ಹಲವಾರು ರೀತಿಯಲ್ಲಿ ಸ್ವಯಂ ಸೇವಕರಿಗೆ ಶಾಖೆಯಲ್ಲಿ ತಿಳಿಸಿಕೊಡಲಾಗುತ್ತಿದೆ ಎಂದು ಹೇಳಿದರು.
ಉತ್ತಮ ಸಮಾಜ ನಿರ್ಮಾಣ ಮಾಡಲು ಕಂಕಣಬದ್ಧವಾಗಿ ಆರ್ಎಸ್ಎಸ್ ಕಾರ್ಯನಿರ್ವಹಿಸುತ್ತಿದೆ. ನವ ಭಾರತ ನಿರ್ಮಾಣದ ಪರಿಕಲ್ಪನೆ ಕನಸು ಸಾಕಾರಗೊಳಿಸುವಲ್ಲಿ ಶ್ರಮಿಸುತ್ತಿದೆ ಎಂದು ಅರುಣ್ಕುಮಾರ್ ಹೇಳಿದರು.
ಆರ್ಎಸ್ಎಸ್ ವಿರಾಜಪೇಟೆ ತಾಲೂಕು ಸಂಘ ಚಾಲಕ್ ಪ್ರಿನ್ಸ್ ಗಣಪತಿ ಮಾತನಾಡಿ, ಸ್ವಯಂ ಸೇವಕರು ಸಂಘದ ತತ್ವ ಸಿದ್ಧಾಂತಗಳ ಅವಲಂಬಿಸಿಕೊಂಡು ಮುಂದುವರಿಯಬೇಕೆಂದರು. ಶಾಖೆಯಲ್ಲಿ ಸ್ವಯಂ ಸೇವಕರ ಸಂಖ್ಯೆ ಹೆಚ್ಚಾಗಬೇಕು. ಸಮಾಜ ನಿರ್ಮಾಣದಲ್ಲಿ ಸಂಘಟಿತವಾಗಿ ಮುನ್ನಡೆಯಬೇಕೆಂದರು.
ಚಾಮುಂಡಿ ಶಾಖಾ ವಾರ್ಷಿಕೋತ್ಸವದಲ್ಲಿ ಬಾಲಕ ಸ್ವಯಂ ಸೇವಕರಿಂದ ಶಾರೀರಿಕ್, ದಂಡ ಪ್ರಯೋಗ, ಪಥ ಸಂಚಲನ, ಯೋಗ ಹಾಗೂ ದೇಶಭಕ್ತಿ ಗಾಯನ ಕಾರ್ಯಕ್ರಮ ನಡೆಯಿತು.