ವಿಜಯಪುರ: ಶಿಷ್ಯವೇತನ (ಫೆಲೋಷಿಪ್) ಕಡಿತಗೊಳಿಸಿರುವುದನ್ನು ಖಂಡಿಸಿ ಡೆಮಾಕ್ರಟಿಕ್ ರಿಸರ್ಚ್ ಸ್ಕಾಲರ್ಸ್ ಸಂಘಟನೆ (ಡಿಆರ್ಎಸ್ಒ) ನೇತೃತ್ವದಲ್ಲಿ ಅಕ್ಕಮಹಾದೇವಿ ವಿವಿ ಮುಖ್ಯದ್ವಾರದ ಮುಂದೆ ಸಂಶೋಧನಾ ವಿದ್ಯಾರ್ಥಿನಿಯರು ಸೋಮವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಡಿಆರ್ಎಸ್ಒ ಸದಸ್ಯೆ ಗೀತಾ ಎಚ್. ಮಾತನಾಡಿ, ಕರೊನಾ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಹಂತದಲ್ಲಿ ಸಂಶೋಧನಾ ವಿದ್ಯಾರ್ಥಿನಿಯರ ಶಿಷ್ಯವೇತನವನ್ನು 15ರಿಂದ 8 ಸಾವಿರ ರೂ.ಗೆ ಕಡಿತ ಮಾಡಲಾಗಿದೆ ಹಾಗೂ ಪ್ರಗತಿ ವರದಿ ಶುಲ್ಕವನ್ನು ಕೂಡ ಹೆಚ್ಚಿಸಿದ್ದಾರೆ. ಸಂಶೋಧನಾ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯವಿಲ್ಲ. ಇದ್ದರೂ ಅದರ ಶುಲ್ಕ ಕೂಡ ಜಾಸ್ತಿಯಾಗಿದೆ. ಐದು ತಿಂಗಳಿಂದ ಶಿಷ್ಯವೇತನವನ್ನು ನೀಡಿಲ್ಲ. ಈ ರೀತಿಯಾದರೆ ವಿದ್ಯಾರ್ಥಿನಿಯರು ಸಂಶೋಧನೆಯನ್ನು ಅರ್ಧಕ್ಕೆ ಕೈಬಿಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿರುವ ಏಕೈಕ ಮಹಿಳಾ ವಿಶ್ವವಿದ್ಯಾಲಯಕ್ಕೆ ಸಾಕಷ್ಟು ವಿದ್ಯಾರ್ಥಿನಿಯರು ಬಡತನದಿಂದಲೇ ಸಂಶೋಧನೆಗೆ ಬರುತ್ತಾರೆ. ಆದ್ದರಿಂದ ಈ ಕೂಡಲೇ ನಿಗದಿಪಡಿಸಿದ ಶಿಷ್ಯವೇತನವನ್ನು ಬಿಡುಗಡೆ ಮಾಡಬೇಕು ಹಾಗೂ ಹಾಸ್ಟೆಲ್ ಸಮಸ್ಯೆ ಮತ್ತು ಪ್ರಗತಿ ವರದಿ ಶುಲ್ಕವನ್ನು ಕೂಡ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು. ದೀಪಾಲಿ, ತ್ರಿವೇಣಿ, ಗೀತಾ ರಾಠೋಡ, ವಿಜಯಲಕ್ಷ್ಮಿ, ಜ್ಞಾನಸುಂದರಿ, ಶೋಭಾ ಎಸ್. ಮುಂತಾದವರು ಭಾಗವಹಿಸಿದ್ದರು.