ಬೆಂಗಳೂರು: ಯಶವಂತಪುರ ಹೋಬಳಿಯ ಚೌಡೇಶ್ವರಿನಗರದ ಲಗ್ಗೆರೆ 50 ಅಡಿ ಮುಖ್ಯರಸ್ತೆಯಲ್ಲಿ ನಿರ್ಮಾಣವಾಗಿದೆ ಎನ್ನಲಾದ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಮಾ.4ರಂದು ನಡೆಸಲು ಉದ್ದೇಶಿಸಿರುವ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಬಿಬಿಎಂಪಿ ಮತ್ತು ಪೊಲೀಸರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಕೋವಿಡ್-19 ಲಾಕ್ಡೌನ್ ನಿರ್ಬಂಧ ದಿನಗಳಲ್ಲಿ ಲಗ್ಗೆರೆ ಮುಖ್ಯರಸ್ತೆಯ ಪಾದಚಾರಿ ಮಾರ್ಗ ಒತ್ತುವರಿ ಮಾಡಿ ದೇವಾಲಯ ನಿರ್ಮಿಸಲಾಗಿದೆ ಎಂದು ಆರೋಪಿಸಿ ಡಿ.ದಾಕ್ಷಾಯಣಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ಪ್ರಸಾದ್ ಅವರ ಪೀಠ ಈ ಆದೇಶ ಮಾಡಿದೆ.
ವಿಗ್ರಹ ಪ್ರತಿಷ್ಠಾನ ಕಾರ್ಯಕ್ರಮ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವುದನ್ನು ಬಿಬಿಎಂಪಿ ವಾರ್ಡ್ ನಂ-73ರ ಹಾಲಿ ಸಹಾಯಕ ಕಾರ್ಯಕಾರಿ ಇಂಜಿನಿಯರ್ ಮೃತ್ಯುಂಜಯ ಖಾತರಿಪಡಿಸಬೇಕು. ಅಗತ್ಯವಿದ್ದರೆ ಆರ್ಎಂಸಿ ಯಾರ್ಡ್ ಸಹಾಯಕ ಪೊಲೀಸ್ ಆಯುಕ್ತ ಹಾಗೂ ರಾಜಗೋಪಾಲನಗರ ಠಾಣೆ ಇನ್ಸ್ಪೆಕ್ಟರ್ ನೆರವು ಪಡೆಯಬಹುದು ಎಂದು ಪೀಠ ತಿಳಿಸಿದೆ.
ಅಲ್ಲದೆ, ಸಂಬಂಧಪಟ್ಟ ನಗರ ಯೋಜನೆ ಇಲಾಖೆ ಸಹಾಯಕ ನಿರ್ದೇಶಕರು, ದೇವಸ್ಥಾನ ನಿರ್ಮಾಣವಾಗಿದೆ ಎನ್ನಲಾದ ಲಗ್ಗೆರೆ 50 ಅಡಿ ಮುಖ್ಯರಸ್ತೆಯ ಪಾದಚಾರಿ ಮಾರ್ಗದ ಕುರಿತು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ಪೊಲೀಸ್ ಇನ್ಸ್ಪೆಕ್ಟರ್ ಆದೇಶದ ಪ್ರತಿಯನ್ನು ಶ್ರೀದುರ್ಗಾಪರಮೇಶ್ವರಿ ಸೇವಾ ಸಮಿತಿಗೆ ತಲುಪಿಸಿ, ವರದಿಯನ್ನು ಮುಂದಿನ ವಿಚಾರಣೆ ವೇಳೆ ಕೋರ್ಟ್ಗೆ ಸಲ್ಲಿಸಬೇಕು. ವಾದಾಂಶ ಮಂಡನೆ ನಂತರ ಈ ಆದೇಶ ತೆರವುಗೊಳಿಸಲು ಕೋರುವುದಕ್ಕೆ ದುರ್ಗಾಪರಮೇಶ್ವರಿ ಸೇವಾ ಸಮಿತಿ ಸ್ವತಂತ್ರವಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಅರ್ಜಿದಾರರ ಪರ ವಕೀಲ ಎನ್.ಪಿ. ಅಮೃತೇಶ್ ಮನವಿಯಂತೆ ಆರ್ಎಂಸಿ ಯಾರ್ಡ್ ಸಹಾಯಕ ಪೊಲೀಸ್ ಆಯುಕ್ತ ಮತ್ತು ರಾಜಗೋಪಾಲ ನಗರ ಠಾಣೆ ಇನ್ಸ್ಪೆಕ್ಟರ್ ಅವರನ್ನು ಹೆಚ್ಚುವರಿ ಪ್ರತಿವಾದಿಯಾಗಿ ಮಾಡಲು ನ್ಯಾಯಪೀಠ ಇದೇ ವೇಳೆ ಅದೇಶಿಸಿದೆ. ಹಾಗೇ, ವಿವಾದಿತ ಜಾಗದ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಈ ಹಿಂದಿನ ಆದೇಶ ಪಾಲಿಸದ ನಗರ ಯೋಜನಾ ಇಲಾಖೆ ಸಹಾಯಕ ನಿರ್ದೇಶಕರ ಕ್ರಮದ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ನ್ಯಾಯಪೀಠ, ವಿಚಾರಣೆಯನ್ನು ಎರಡು ವಾರ ಮುಂದೂಡಿತು.