ಬೆಂಗಳೂರು: ಮಾಂಡೌಸ್ ಸೈಕ್ಲೋನ್ ಪರಿಣಾಮದಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಮುಂದಿನ ಮೂರು ದಿನ ಮುಂದುವರಿಯಲಿದೆ.
ಶನಿವಾರ ಕೋಲಾರದ ಟಮಕದಲ್ಲಿ 20 ಮಿಮೀ ಮಳೆಯಾಗಿದೆ. ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬಿದ್ದಿದೆ. ಬೆಂ.ಗ್ರಾಮಾಂತರ, ಚಿತ್ರದುರ್ಗ,ಮಂಡ್ಯ, ರಾಮನಗರ ಮತ್ತು ತುಮಕೂರಿನಲ್ಲಿ ಭಾನುವಾರ (ಡಿ.11) ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ ಮತ್ತು ಮೈಸೂರಿನಲ್ಲಿಯೂ ಜೋರಾಗಿ ಮಳೆಯಾಗುವ ಹಿನ್ನೆಲೆಯಲ್ಲಿ ಡಿ.11ರಂದು ಯೆಲ್ಲೋ ಅಲರ್ಟ್ ಇರಲಿದೆ.
ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ ಸುರಿಯಲಿದೆ. ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರ ಹೆಚ್ಚಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಚಳಿಗೆ ರಾಜ್ಯ ಥಂಡಾ
ಸೈಕ್ಲೋನ್ ಪರಿಣಾಮದಿಂದ ಶೀತಗಾಳಿ ಮತ್ತು ಜಿಟಿ ಜಿಟಿ ಮಳೆಗೆ ರಾಜ್ಯ ನಲುಗಿದೆ. ಶುಕ್ರವಾರ ರಾತ್ರಿ ಮತ್ತು ಶನಿವಾರ ಮುಂಜಾನೆಯಿಂದ ಚಳಿ ಆರ್ಭಟ ಹೆಚ್ಚಾಗಿದೆ. ಮೈಕೊರೆಯುವ ಚಳಿಗೆ ಮುಂಜಾನೆ ಮನೆಯಿಂದ ಜನರು ಹೊರಬರಲು ಕಷ್ಟಪಡುವಂತಾಯಿತು. ಸೈಕ್ಲೋನ್ನಿಂದ ಗಾಳಿ ವೇಗ ಹೆಚ್ಚಾಗಿರುವ ಕಾರಣದಿಂದ ಚಳಿ ತೀವ್ರಗೊಂಡಿದೆ.