ಗೋಕರ್ಣ: ಇಲ್ಲಿನ ಪುರಾಣ ಪ್ರಸಿದ್ಧ ಕೋಟಿತೀರ್ಥದಲ್ಲಿ ನಿತ್ಯ ಕ್ಷೇತ್ರದ ಪುರೋಹಿತರ ಮುಖಾಂತರ ಯಾತ್ರಿಕರು ನಡೆಸುತ್ತಿದ್ದ ಧಾರ್ವಿುಕ ಕಾರ್ಯಗಳಿಗೆ ಸ್ಥಳೀಯ ಪಂಚಾಯಿತಿಯು ಗುತ್ತಿಗೆದಾರರ ಮೂಲಕ ಶುಲ್ಕ ವಸೂಲಿಗೆ ಮುಂದಾಗಿದೆ. ಇದಕ್ಕೆ ಶ್ರೀಪಟ್ಟ ವಿನಾಯಕ ಗೆಳೆಯರ ಬಳಗ ಮತ್ತು ಸ್ಥಳೀಯ ಪುರೋಹಿತರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪಂಚಾಯಿತಿಯಿಂದ ಟೆಂಡರ್ ಪಡೆದವರು ಸ್ಥಳಕ್ಕೆ ಬಂದು ಶುಲ್ಕ ವಸೂಲಿಗೆ ಮುಂದಾದಾಗ ಅದನ್ನು ವಿರೋಧಿಸಿ ಶುಲ್ಕ ನಿರಾಕರಿಸಿ, ಗುತ್ತಿಗೆದಾರರನ್ನು ವಾಪಸ್ ಕಳಿಸಿದ ಘಟನೆ ಶುಕ್ರವಾರ ನಡೆದಿದೆ.
ಶ್ರೀಪಟ್ಟ ವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ಮಹಾಬಲೇಶ್ವರ ಭಡ್ತಿ ಮಾತನಾಡಿ, ಧಾರ್ವಿುಕ ಕಾರ್ಯಗಳಿಗೆ ಮೀಸಲಿರುವ ಕೋಟಿತೀರ್ಥದಲ್ಲಿ ಸ್ವಚ್ಛತೆ ಕಾರ್ಯವನ್ನು ನಮ್ಮ ಸಂಸ್ಥೆ ಅನೇಕ ವರ್ಷಗಳಿಂದ ನಿರ್ವಹಿಸುತ್ತಿದೆ. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ನೇಮಿಸಲಾಗಿದೆ. ಇದರೊಂದಿಗೆ ಧಾರ್ವಿುಕ ಕಾರ್ಯ ನಡೆಸುವವರಿಗೆ ಅಗತ್ಯ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ ಎಂದರು.
ಈ ನಡುವೆ ಪಂಚಾಯಿತಿಯಿಂದ ಧಾರ್ವಿುಕ ಕಾರ್ಯಗಳಿಗೆ ಶುಲ್ಕ ವಸೂಲಿಗೆ ವಿರೋಧ ಕುರಿತ ಪ್ರಕರಣ ನ್ಯಾಯಾಲಯದ ಮುಂದಿದೆ. ಈಗಾಗಲೇ ನ್ಯಾಯಾಲಯ ನೀಡಿರುವ ಮಧ್ಯಂತರ ಆದೇಶದಲ್ಲಿ ಕೋಟಿತೀರ್ಥದಲ್ಲಿ ಪುರೋಹಿತರ ದ್ವಾರಾ ಪರಂಪರೆಯಿಂದ ಕೈಗೊಳ್ಳುತ್ತ ಬಂದ ಧಾರ್ವಿುಕ ಕಾರ್ಯಗಳಿಗೆ ಯಾವುದೇ ಅಡೆತಡೆ ಉಂಟು ಮಾಡದಂತೆ ಪಂಚಾಯಿತಿಗೆ ಸೂಚಿಸಿದೆ. ಅಲ್ಲದೆ, ಯಾವುದೇ ಶುಲ್ಕ ವಸೂಲಿ ಮಾಡುವಂತೆ ನ್ಯಾಯಾಲಯ ಆದೇಶಿಸಿಲ್ಲ. ಆದರೆ, ಸ್ಥಳೀಯ ಪಂಚಾಯಿತಿಯು ಟೆಂಡರ್ ಕರೆದು ಶುಲ್ಕ ವಸೂಲಾತಿಗೆ ಮುಂದಾಗಿದೆ. ಟೆಂಡರ್ ರದ್ದುಪಡಿಸಿ ಇಲ್ಲಿನ ನಿರ್ವಹಣೆಯನ್ನು ಧಾರ್ವಿುಕ ಕಾರ್ಯ ನಡೆಸುವ ಸಂಘಟನೆಗೆ ಕಾಯ್ದಿರಿಸಬೇಕು ಎಂದು ವಿನಂತಿಸಿದರು.
ಪುರೋಹಿತರಾದ ವೇ. ಶಿವರಾಮ ಮಯ್ಯರ, ವೇ. ನರಸಿಂಹ ಜೋಶಿ, ವೇ. ಗಣೇಶ ಜಂಭೆ, ವೇ.ದತ್ತಾತ್ರೇಯ ಹಿರೇಗಂಗೆ, ಇತರರಿದ್ದರು.