ಹುಬ್ಬಳ್ಳಿ: ಉತ್ತರ ಕನ್ನಡ, ಧಾರವಾಡ ಹಾಗೂ ಗದಗ ಜಿಲ್ಲೆಯ ವಿವಿಧೆಡೆ ವ್ಯಾಪಕ ಮಳೆಯಾಗಿದ್ದು, ಇದರಿಂದ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಶನಿವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಅತ್ಯಧಿಕ ಎಂದರೆ 127.6 ಮಿಮೀ ಮಳೆಯಾಗಿದೆ. ಭಾರಿ ಬಿಸಿಲು ಹಾಗೂ ಉಷ್ಣತೆಯಿಂದ ಕಾದ ಕಾವಲಿಯಂತಾಗಿದ್ದ ಕರಾವಳಿಗೆ ಮಳೆ ತಂಪೆರೆದಿದೆ. ಗೋಕರ್ಣದಲ್ಲಿ ಮಳೆಯಿಂದ ಪ್ರಸಿದ್ಧ ಮಹಾಬಲೇಶ್ವರ ದೇಗುಲದ ಆತ್ಮಲಿಂಗ ಜಲಾವೃತವಾಗಿದ್ದು, ಪೂಜೆ, ದರ್ಶನವನ್ನು ಬಂದ್ ಮಾಡಲಾಗಿದೆ. ಅಂಕೋಲಾದಲ್ಲಿ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಭಟ್ಕಳ ಸಮೀಪ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ದೋಣಿಯೊಂದು ಮುಳುಗಡೆಯಾಗಿದ್ದು, ಲಕ್ಷಾಂತರ ರೂ. ಹಾನಿಯಾಗಿದೆ.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಸಿಡಿಲು ಬಡಿದು 3 ಕುರಿಗಳು ಮೃತಪಟ್ಟಿವೆ. ಕೆಲೂರು ಗ್ರಾಮದಲ್ಲಿ ಒಂದು ಎಮ್ಮೆ ಹಾಗೂ ಒಂದು ಎತ್ತು ಮೃತಪಟ್ಟಿವೆ. ಸ್ಥಳಕ್ಕೆ ಕಂದಾಯ ಇಲಾಖೆ, ಪಶು ಇಲಾಖೆ, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಿರೇವಡ್ಡಟ್ಟಿ, ಬೂದಿಹಾಳ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಧರಗೆ ಉರುಳಿವೆ.