ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಹೇಳಿದರು.
ಧಾರವಾಡದಲ್ಲಿ ನಡೆದ ಸಿಎಎ ಹಾಗೂ ಎನ್ಆರ್ಸಿ ವಿರೋಧಿ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಎನ್ಆರ್ಸಿ ಮತ್ತು ಸಿಎಎ ಕಾನೂನು ಈ ಹಿಂದೆಯೂ ಬಂದಿತ್ತು. ಆಗಲೂ ಈ ಕಾಯ್ದೆ ಸಂವಿಧಾನ ವಿರೋಧಿ ಎಂದು ಈಶಾನ್ಯ ರಾಜ್ಯಗಳು ಮಾತ್ರ ಹೋರಾಟ ಮಾಡಿದ್ದವು. ಹೋರಾಟಕ್ಕೆ ಮಣಿದು ಕಾಯ್ದೆ ಹಿಂದಕ್ಕೆ ಪಡೆಯಲಾಗಿತ್ತು. ಲೋಕಸಭಾ ಚುನಾವಣೆ ವೇಳೆ ಅಮಿತ್ ಷಾ ಅವರು ಪಶ್ಚಿಮ ಬಂಗಾಳದಲ್ಲಿ ಈ ಕಾಯ್ದೆ ಕೇವಲ ಈಶಾನ್ಯ ರಾಜ್ಯಗಳಿಗೆ ಮಾತ್ರ ಸಿಮೀತಗೊಂಡಿಲ್ಲ. ಇಡೀ ರಾಷ್ಟ್ರದಲ್ಲಿ ಜಾರಿಯಾಗುತ್ತದೆ.
ರಾಷ್ಟ್ರದ ನಾಗರಿಕರು ಅಲ್ಲದವರನ್ನು ಹುಡುಕಿ ಹೊರ ಹಾಕಲಾಗುತ್ತದೆ ಎಂದು ಹೇಳಿದ್ದರು. ಹೀಗಾಗಿ ಎಲ್ಲ ಜನರು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದಾರೆ ಎಂದರು.
ಎಷ್ಟೇ ಪ್ರತಿಭಟನೆ ನಡೆದರೂ ಒಂದಿಂಚು ಹಿಂದಕ್ಕೆ ಸರಿಯುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ. ಆದರೆ ಅವರು ಈಗಾಗಲೇ ಕಾಯ್ದೆಯಿಂದ 2 ಕಿ.ಮೀ.ದೂರ ಹಿಂದಕ್ಕೆ ಸರಿದಿದ್ದಾರೆ. ಕೇವಲ ಒಂದಿಂಚು ಮಾತ್ರ ಉಳಿದಿದೆ. ಒಂದು ಇಂಚು ಹಿಂದಕ್ಕೆ ಸರಿದರೆ ಹಿಂದೆ ದೊಡ್ಡಹಳ್ಳವೇ ಇದೆ. ಈ ಕಾಯ್ದೆ ವಿರುದ್ಧ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳುತ್ತದೆ. ಈ ಸರ್ಕಾರ ಯಾವತ್ತು ಬೀಳುತ್ತದೆಯೋ ಅವತ್ತೆ ಕಾಯ್ದೆಯೂ ರದ್ದಾಗುತ್ತದೆ ಎಂದರು. (ದಿಗ್ವಿಜಯ ನ್ಯೂಸ್)