ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಪಕ್ಷಾಂತರ ಪರ್ವ ಆರಂಭಗೊಂಡಿದೆ.
ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದರೂ ಕಾಂಗ್ರೆಸ್ ಪಕ್ಷವು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಹಾಗೂ ಮುಖಂಡರನ್ನು ಸೆಳೆಯಲು ಮುಂದಾಗಿದೆ. ಇದು ಈಗ ಪ್ರತಿಪಕ್ಷಗಳ ಪಾಳೆಯದಲ್ಲಿ ಒಳಗೊಳಗೇ ನಡುಕ ಉಂಟು ಮಾಡಿದೆ.
ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ, ಕಾಂಗ್ರೆಸ್ನಿಂದ ಒಬ್ಬರ ಮೇಲೊಬ್ಬರಂತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಜೆಡಿಎಸ್ಗೆ ಈ ಬೆಳವಣಿಗೆಯಿಂದ ಬರ ಸಿಡಿಲು ಬಡಿದಂತಾಗಿದೆ. ಯಾರೊಬ್ಬರೂ ಪಕ್ಷ ಬಿಟ್ಟುಹೋಗದಂತೆ ಹಿಡಿದಿಟ್ಟುಕೊಳ್ಳಬಹುದಾದ ಸವಾಲು ಎದುರಾಗಿದೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ‘ಬರುವವರು ಇದ್ದರೆ ಮೈಸೂರು ಪೇಟ ಶಾಲು ಹಾಕಿ ಕರೆದುಕೊಂಡು ಹೋಗಲಿ’ ಎಂದು ಮೇಲ್ನೋಟಕ್ಕೆ ಹೇಳಿದರೂ ಒಳಗೊಳಗೇ ಪಕ್ಷ ಬಿಟ್ಟುಹೋಗುವವರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.
ಮಗ್ಗಲು ಬದಲಿಸಿದ ಮಂಜುನಾಥ್
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದ ಆಯುನೂರು ಮಂಜುನಾಥ್ ಮಗ್ಗಲು ಬದಲಿಸಿ ಕಾಂಗ್ರೆಸ್ ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅಲರ್ಟ್ ಆಗಿದ್ದಾರೆ. ಜೆಡಿಎಸ್ನಿಂದ ಬರುವವರ ಪಟ್ಟಿಯೂ ತಮ್ಮ ಬಳಿ ಇದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಜೆಡಿಎಸ್ ಭದ್ರಕೋಟೆ ಅಭದ್ರಗೊಳ್ಳುವ ಆತಂಕ ತಂದೊಡ್ಡಿದೆ.
ವಿಶೇಷವಾಗಿ ಮೈಸೂರು ಭಾಗದಲ್ಲಿ ಮರ್ಮಾಘಾತ ನೀಡಲು ಜೆಡಿಎಸ್ ನಾಯರನ್ನು ಸೆಳೆಯುವುದು ಕಾಂಗ್ರೆಸ್ನ ತಂತ್ರ ಬಹು ದೊಡ್ಡ ಭಾಗವಾಗಿದೆ. ಹಾಗಾಗಿ ಮುಂಬರುವ ಲೋಕಸಭೆ ಚುನಾವಣೆ ಜೆಡಿಎಸ್ಗೆ ಸವಾಲಾಗಿದೆ.