ಕೊಡೇಕಲ್: ರೈತರ ನಂಬಿಕೆಯನ್ನು ಉಳಿಸಿಕೊಳ್ಳುತ್ತಿದ್ದ ಹಸ್ತ ಮಳೆ ಈ ವರ್ಷ ಮುನಿಸಿಕೊಂಡಿದ್ದರಿಂದ ಹುಣಸಗಿ ತಾಲೂಕಿನಲ್ಲಿ ಬೆಳೆಗಳು ಬಾಡುವ ಹಂತಕ್ಕೆ ಬಂದಿವೆ. ಅದರಲ್ಲೂ ಹೂ ಬಿಟ್ಟು ಕಾಯಿ ಕಟ್ಟುವ ಹಂತದಲ್ಲಿರುವ ತೊಗರಿ ಬೆಳೆಗೆ ಭೂಮಿಯಲ್ಲಿ ತೇವಾಂಶ ಕೊರತೆಯಿಂದಾಗಿ ಹೂಗಳು ಉದುರತೊಡಗಿದ್ದು, ಅನ್ನದಾತರಲ್ಲಿ ಆತಂಕ ಮೂಡಿಸಿದೆ.
ತೊಗರಿ ಬೆಳೆಯಲ್ಲಾದರೂ ಉತ್ತಮ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರಿಗೆ ಸದ್ಯದ ಸ್ಥಿತಿ ಹುಸಿಗೊಳಿಸುವಂತೆ ಮಾಡಿದೆ. ಈಗಾಗಲೇ ಹೂ ಬಿಟ್ಟು ಕಾಯಿ ಕಟ್ಟುವ ಹಂತದಲ್ಲಿರುವ ಬೆಳೆಗೆ ಮಳೆ ಅಗತ್ಯವಿದೆ. ಇನ್ನೊಂದು ವಾರದಲ್ಲಿ ಮಳೆಯಾಗದಿದ್ದಲ್ಲಿ ತೊಗರಿ ಬೆಳೆಯೂ ಕೈತಪ್ಪಲಿದೆ.
ಮಳೆಯಾಗದೆ ಬೆಳೆಗಳು ಬಾಡುತ್ತಿರುವುದು ಒಂದೆಡೆಯಾದರೆ, ವಿಮೆ ಮಾಡಿಸಿದ ರೈತರ ಖಾತೆಗೆ ಹಣ ಜಮೆ ಆಗದಿರುವುದು ಇನ್ನೊಂದೆಡೆ. ಸರ್ಕಾರ ಹುಣಸಗಿ ತಾಲೂಕು ಅನ್ನು ಸಾಧಾರಣ ಬರಪೀಡಿತ ಪ್ರದೇಶವೆಂದು ಘೋಷಿಸಿದೆ. ಆದರೆ ಸಾಧಾರಣ ಬರವಲ್ಲ, ಸಂಪೂರ್ಣ ಬರಪೀಡಿತ ಘೋಷಿಸಿ ರೈತರ ನೆರವಿಗೆ ಸರ್ಕಾರ ಬರಬೇಕು ಎಂಬುದು ಕೃಷಿಕರ ಒಕ್ಕೊರಲ ಆಗ್ರಹವಾಗಿದೆ.
ಈಗಾಗಲೇ ಹತ್ತಿಗೆ ರೋಗ ಬಂದು ಹಾಳಾಗಿದೆ. ತೊಗರಿ ಬೆಳೆಯಿಂದ ಉತ್ತಮ ಇಳುವರಿ ಪಡೆಯಬೇಕೆಂಬ ನಮ್ಮ ಕನಸು ಸಹ ಮಳೆರಾಯ ನುಚ್ಚುನೂರು ಮಾಡಿದ್ದಾನೆ. ಹಸ್ತ ಮಳೆ ಬರುತ್ತದೆ ಎಂಬ ನಂಬಿಕೆ ಸುಳ್ಳಾಗಿದೆ. ತೊಗರಿ ಬೆಳೆ ಒಣಗುತ್ತಿದೆ. ಮಳೆ ಬಾರದಿದ್ದಲ್ಲಿ ನಮ್ಮ ಗತಿ ದೇವರೇ ಬಲ್ಲ.
| ಶ್ರೀಶೈಲ ಸಜ್ಜನ್ ಕೊಡೇಕಲ್ ರೈತ