ಹೂವಿನಹಡಗಲಿ: ದೇಶದಲ್ಲಿ ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಇದನ್ನು ತಪ್ಪಿಸುವುದಕ್ಕಾಗಿ ಈರುಳ್ಳಿಯನ್ನು ಖರೀದಿಸಲಾಗುತ್ತಿದೆ ಎಂದು ತಹಸೀಲ್ದಾರ್ ಕೆ.ವಿಜಯಕುಮಾರ್ ಹೇಳಿದರು.
ತಾಲೂಕು ಕಚೇರಿ ಆವರಣದಲ್ಲಿ ಬುಧವಾರ ಕಗ್ಗಲಗಟ್ಟಿ ತಾಂಡಾದ ರೈತ ಮೋತಿನಾಯ್ಕ ಹಾಗೂ ರುಕ್ಮಿಣಿಬಾಯಿ ಇವರ 80 ಈರುಳ್ಳಿ ಪಾಕೀಟ್ಗಳನ್ನು ಖರೀದಿ ಮಾಡಿ ಮಾತನಾಡಿದರು. ರೈತರ ಮಕ್ಕಳ ಮದುವೆಗಾಗಿ ಹಣವಿಲ್ಲದೇ ಪರದಾಡುತ್ತಿದ್ದರು. ಅವರ ಕಷ್ಟಗಳ ನಿವಾರಣೆಗಾಗಿ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಇವರ ಈರುಳ್ಳಿಯನ್ನು ಖರೀದಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಈರುಳ್ಳಿ ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಂ. ಸಿದ್ದೇಶ ಮಾತನಾಡಿ, ಸರ್ಕಾರ ಕೂಡಲೇ ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸಬೇಕು. ಕೇವಲ ಪರಿಹಾರದಿಂದ ರೈತರ ಸಮಸ್ಯೆ ಬಗೆ ಹರಿಯುವುದಿಲ್ಲ. ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಸಿಗುವಂತೆ ಮಾಡಬೇಕು ಎಂದು ಹೇಳಿದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ದುರ್ಗಾಪ್ರಸಾದ್, ಪುರಸಭೆ ಮುಖ್ಯಾಧಿಕಾರಿ ಡಿ.ಬಿ.ಈರಣ್ಣ, ರೈತ ಸಂಘದ ಮುಖಂಡ ಬಸವನಗೌಡ, ಉಮೇಶ, ಶರಣಪ್ಪ, ಮೋತಿನಾಯ್ಕ ಸೇರಿ ಇತರರಿದ್ದರು.