ರಾಣೆಬೆನ್ನೂರ: ಏಕಮುಖ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಇಲ್ಲಿಯ ರಂಗನಾಥ ನಗರದ ಕುಂಬಾರ ಓಣಿ ನಿವಾಸಿಗಳು ಸಾರಿಗೆ ಸಂಸ್ಥೆ ಬಸ್ ಸೇರಿ ಇತರ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಕುಂಬಾರ ಓಣಿ ರಸ್ತೆ ಮಾರ್ಗವಾಗಿ ಸಾರಿಗೆ ಸಂಸ್ಥೆ ಬಸ್, ಲಾರಿ, ಗೂಡ್ಸ್ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಓಡಾಡುತ್ತಿವೆ. ಕೆಲವರು ಹಗಲಿನಲ್ಲಿಯೆ ಮದ್ಯಪಾನ ಮಾಡಿ ವಾಹನ ಓಡಿಸುತ್ತಿರುವ ಕಾರಣ ಬಡಾವಣೆಯಲ್ಲಿನ ಮಕ್ಕಳು ರಸ್ತೆಯಲ್ಲಿ ಓಡಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ.
ಆದ್ದರಿಂದ ಸ್ಥಳಕ್ಕೆ ಶಾಸಕರು, ಪೊಲೀಸರು ಬಂದು ಸಮಸ್ಯೆಗೆ ಪರಿಹಾರ ಒದಗಿಸುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟುಹಿಡಿದರು. ಸ್ಥಳಕ್ಕೆ ಶಾಸಕ ಅರುಣಕುಮಾರ ಪೂಜಾರ, ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಈ ರಸ್ತೆಯನ್ನು ಏಕಮುಖ ಸಂಚಾರಕ್ಕೆ ಸೂಚಿಸಬೇಕು. ಅಲ್ಲಿಯವರೆಗೆ ಒಬ್ಬ ಪೊಲೀಸ್ ಸಿಬ್ಬಂದಿ ನೇಮಕ ಮಾಡಿ ವಾಹನಗಳನ್ನು ಏಕಮುಖವಾಗಿ ಸಂಚರಿಸುವಂತೆ ನೋಡಿಕೊಳ್ಳಲು ವ್ಯವಸ್ಥೆ ಕಲ್ಪಿಸಿ ಎಂದು ಸೂಚಿಸಿದರು. ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.