ಸಾಗರ: ತಾಲೂಕಿನ ಎಸ್.ಎಸ್.ಭೋಗ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಠಿ ಮತ್ತು ಹೊಸಗದ್ದೆ ಇತರ ಗ್ರಾಮಗಳಿಗೆ ಅಳವಡಿಸಲಾಗಿದ್ದ ವಿದ್ಯುತ್ ತಂತಿಗಳನ್ನು ಕಳ್ಳತನ ಮಾಡಲಾಗಿದೆ. ತಾಲೂಕಿನ ಮರಾಠಿ ಮತ್ತು ಹೊಸಗದ್ದೆ ಗ್ರಾಮಗಳಿಗೆ ಇಕ್ಕಿಬೀಳು ಗ್ರಾಮದಲ್ಲಿ ಟ್ರಾನ್ಸ್ಫಾರ್ಮರ್ ಅಳವಡಿಸಿ ಕಂಬದ ಮೂಲಕ ತಂತಿ ಎಳೆಯಲಾಗಿದೆ. ರಾತ್ರಿ ಕಳ್ಳರು ಇಕ್ಕಿಬೀಳು ಗ್ರಾಮದ ಟ್ರಾನ್ಸ್ಫಾರ್ಮರ್ನಲ್ಲಿ ವಿದ್ಯುತ್ ಹರಿಯುವುದನ್ನು ನಿಲ್ಲಿಸಿ, ಚಾರ್ಜರ್ ಆಫ್ ಮಾಡಿ ಅಂದಾಜು ಒಂದು ಸಾವಿರ ಮೀಟರ್ ವಿದ್ಯುತ್ ತಂತಿಯನ್ನು ಕದ್ದೊಯ್ದಿದ್ದಾರೆ.
ಶರಾವತಿ ಅಭಯಾರಣ್ಯದ ಎಸ್.ಎಸ್.ಭೋಗ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಠಿ, ಹೊಸಗದ್ದೆ ಇತರ ಗ್ರಾಮಗಳಿಗೆ ನಾಗರಿಕ ಸೌಲಭ್ಯ ಸಿಗುವುದೇ ಮರೀಚಿಕೆಯಾಗಿದೆ. ಗ್ರಾಮಸ್ಥರು ಸಾಕಷ್ಟು ಮನವಿ ಮಾಡಿ ಅಂತಿಮವಾಗಿ ವಿದ್ಯುತ್ ಸಂಪರ್ಕವನ್ನು ಪಡೆದಿದ್ದಾರೆ. ಅದೂ ಗುಡ್ಡದ ಮೇಲೆ ಕಂಬ ನೆಟ್ಟು ತಂತಿಯನ್ನು ಎಳೆಯಲಾಗಿತ್ತು. ಅಂತಹ ತಂತಿಯನ್ನು ಕಳ್ಳತನ ಮಾಡಿರುವುದರಿಂದ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಇಲ್ಲದಂತಾಗಿದೆ.