ಬೆಂಗಳೂರು: ‘ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಭಗವಂತ..’ ಎಂದಿದ್ದ ‘ಏಕ್ಲವ್ಯಾ’ ಇದೀಗ ಮತ್ತೊಮ್ಮೆ ದೇವರ ಮೊರೆ ಹೋಗಿದ್ದಾನೆ. ಮಾತ್ರವಲ್ಲ ‘ಪ್ರೀತೀನೇ ದೇವರು ಅಂತ ಹೇಳಿದವರು ಯಾರು? ದೇವರೊಬ್ಬ ಬಿಸಿನೆಸ್ಮ್ಯಾನ್ ಕಣೋ..’ ಎಂದೂ ಹೇಳಲಾರಂಭಿಸಿದ್ದಾನೆ.
ಅರ್ಥಾತ್, ‘ಏಕ್ಲವ್ಯಾ’ ಸಿನಿಮಾದ ಮತ್ತೊಂದು ಹಾಡಲ್ಲೂ ಇದೀಗ ದೇವರನ್ನು ನೆನಪಿಸಿಕೊಳ್ಳಲಾಗಿದೆ. ಈ ಚಿತ್ರದ ನಾಲ್ಕನೇ ಸಾಂಗ್ ‘ಒಂದು ಊರಲಿ.. ಕೊನೇ ಬೀದಿಲಿ..’ ಇಂದು ಬಿಡುಗಡೆ ಆಗಿದೆ. ಪ್ರಿಯಕರನ ನೆನಪಲ್ಲಿ ಹೀರೋಯಿನ್ ಹಾಡುವ ‘ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಭಗವಂತ..’ ಎಂಬ ಬ್ರೇಕಪ್ ಸಾಂಗ್ಗೆ ತಾವೇ ಸಾಹಿತ್ಯ ರಚಿಸಿದ್ದ ನಿರ್ದೇಶಕ ಪ್ರೇಮ್, ಇದೀಗ ಹೀರೋ ಪ್ರೇಯಸಿ ಗುಂಗಲ್ಲಿ ದೇವತೆ-ದೇವರನ್ನು ನೆನಪಿಸಿಕೊಳ್ಳುವ ದೃಶ್ಯಾವಳಿಯ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. ಶರಣಕುಮಾರ್ ಗಜೇಂದ್ರಗಡ ಸಾಹಿತ್ಯ ರಚಿಸಿರುವ ಈ ಹಾಡನ್ನು ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಶಂಕರ್ ಮಹದೇವನ್ ಹಾಡಿದ್ದಾರೆ.
‘ಏಕ್ಲವ್ಯಾ’ ಚಿತ್ರದ ಮೂರನೇ ಸಾಂಗ್ ‘ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಭಗವಂತ..’ ಕೆಲವು ದಿನಗಳ ಕಾಲ ಯೂ-ಟ್ಯೂಬ್ನಲ್ಲಿ ಟಾಪ್ ಟ್ರೆಂಡಿಂಗ್ನಲ್ಲಿತ್ತು. ಮಾತ್ರವಲ್ಲ ಇದುವರೆಗೆ 85 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಪ್ರೇಮ್ ನಿರ್ದೇಶನ, ರಕ್ಷಿತಾ ಪ್ರೇಮ್ ನಿರ್ಮಾಣದ ‘ಏಕ್ಲವ್ಯಾ’ ಸಿನಿಮಾದಲ್ಲಿ ರಕ್ಷಿತಾ ಸಹೋದರ ರಾಣಾ ನಾಯಕನಾಗಿ ಅಭಿನಯಿಸಿದ್ದು, ರಚಿತಾ ರಾಮ್ ಮತ್ತು ರೀಷ್ಮಾ ನಾಯಕಿಯರಾಗಿ ನಟಿಸಿದ್ದಾರೆ. ಈ ಚಿತ್ರ ಜ. 21ರಂದು ತೆರೆ ಕಾಣಲಿದೆ.
ಮೆಲ್ಲನೆ ದೂರ ಹೋಗೋ ಮುನ್ನ ಖುಷಿಯಲಿ ನಶೆಯಲಿ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತ!?