ರಾಯಚೂರು: ಖಾಸಗಿ ಕೆಮಿಕಲ್ ಕಂಪನಿಯೊಂದರಲ್ಲಿ ಅನಿಲ ಸೋರಿಕೆಯಿಂದಾಗಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಮೂವರ ಪರಿಸ್ಥಿತಿ ಗಂಭೀರಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಯಚೂರು ಹೊರವಲಯದಲ್ಲಿರುವ ಜೀವ ಫಾರ್ಮಸ್ ಎಂಬ ಕಂಪನಿಯಲ್ಲಿ ಈ ಘಟನೆ ಸಂಭವಿಸಿದೆ. ಇದು ಹೈದರಾಬಾದ್ ಮೂಲದ ಕಂಪನಿಯಾಗಿದ್ದು, ಅನಿಲ ಸೋರಿಕೆಯಿಂದಾಗಿ ಇಲ್ಲಿನ ಕಾರ್ಮಿಕ ಪುಲುರಂಗಡು (30) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸೋರಿದ ಅನಿಲ ಸೇವನೆಯಿಂದಾಗಿ ತೀವ್ರ ಅಸ್ವಸ್ಥಗೊಂಡಿರುವ ಶ್ರೀನಿವಾಸ್ ರೆಡ್ಡಿ, ತಿಮ್ಮಪ್ಪ, ವೀರೇಶ್ ಎಂಬುವರನ್ನ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕಂಪನಿಯಲ್ಲಿದ್ದ ಕಾರ್ಮಿಕರು ಅನಿಲ ದುರಂತದ ಬಳಿಕ ಕೆಲಸ ಬಿಟ್ಟು ಓಡಿಹೋಗಿದ್ದಾರೆ. ಸ್ಥಳಕ್ಕೆ ರಾಯಚೂರು ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.