ಬೆಂಗಳೂರು: ಇನ್ಸ್ಟಾಗ್ರಾಂ ಮೂಲಕ ಯುವತಿಯನ್ನು ಪರಿಚಯ ಮಾಡಿಕೊಂಡು, ಚಿನ್ನಾಭರಣ ನೀಡುವಂತೆ ಬ್ಲಾಕ್ ಮೇಲ್ ಮಾಡಿ, ಕೊನೆಗೆ ಯುವತಿ ಮನೆಯಲ್ಲೇ ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮಾದನಾಯಕನಹಳ್ಳಿಯ ಘನಶ್ಯಾಮ್ ಅಲಿಯಾಸ್ ಅಭಿಗೌಡ ಬಂಧಿತ ಆರೋಪಿ. ಕೆಂಪೇಗೌಡ ಗಾರ್ಡನ್ ರಸ್ತೆಯಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಘನಶ್ಯಾಮ್ನನ್ನು ಗಸ್ತು ಸಿಬ್ಬಂದಿ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಜೇಬಿನಲ್ಲಿ ಚಿನ್ನ ಪತ್ತೆಯಾಗಿದೆ. ಠಾಣೆಗೆ ಕರೆತಂದು ಆರೋಪಿಯನ್ನು ವಿಚಾರಿಸಿದಾಗ ಗೆಳತಿ ಮನೆಯಲ್ಲಿ ಕಳವು ಮಾಡಿರುವುದು ಬಾಯ್ಬಿಟ್ಟಿದ್ದಾನೆ. ಆರೋಪಿಯಿಂದ 8 ಲಕ್ಷ ರೂ. ಮೌಲ್ಯದ 180 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಪಿಯುಸಿಗೆ ಓದು ಮೊಟಕುಗೊಳಿಸಿ ಕೆಲಸವಿಲ್ಲದೆ ಅಲೆಯುತ್ತಿದ್ದ ಘನಶ್ಯಾಮ್, ದುಶ್ಚಟಗಳ ದಾಸನಾಗಿದ್ದ. ಇನ್ಸ್ಟಾ ಗ್ರಾಂನಲ್ಲಿ ಅಭಿಗೌಡ ಎಂಬ ಹೆಸರಿನಲ್ಲಿ ಖಾತೆ ತೆರೆದು ಯುವತಿಯರಿಗೆ ಗಾಳ ಹಾಕುತ್ತಿದ್ದ. ಕೆಲ ದಿನಗಳ ಹಿಂದೆ ಖಾಸಗಿ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಪರಿಚಯ ಆಗಿತ್ತು. ಚಾಟಿಂಗ್ನಲ್ಲಿ ಇಬ್ಬರಲ್ಲಿ ಆತ್ಮೀಯತೆ ಬೆಳೆದಿತ್ತು. ನನ್ನ ಮನೆಯಲ್ಲಿ ಆರ್ಥಿಕ ಸಮಸ್ಯೆ ಇದೆ ಎಂದು ಗೆಳತಿ ಬಳಿ ಸುಳ್ಳು ಹೇಳಿ ಸಹಾಯ ಕೋರಿದ್ದ. ಇದಕ್ಕೆ ಮರುಳಾದ ಯುವತಿ, ಪಾಲಕರಿಗೆ ಗೊತ್ತಾಗದಂತೆ ಚಿನ್ನದ ಸರವನ್ನು ತಂದು ಗೆಳೆಯನಿಗೆ ಕೊಟ್ಟಿದ್ದಳು. ಈ ಆಭರಣವನ್ನು ಗಿರವಿ ಇಟ್ಟು ಆರೋಪಿ ಮೋಜು-ಮಸ್ತಿ ಮಾಡಿದ್ದಾನೆ.
ಸ್ನೇಹಿತೆ ಮನೆಯಲ್ಲೇ ಕಳ್ಳತನ:
ಪದೇ ಪದೆ ಹಣಕ್ಕೆ ಬೇಡಿಕೆ ಒಡ್ಡಿದ್ದರಿಂದ ಬೇಸತ್ತ ಯುವತಿ ಆರೋಪಿ ಜತೆಗಿನ ಸ್ನೇಹ ಸಂಬಂಧ ಕಡಿತ ಮಾಡಿದ್ದಳು. ನೀನು ಮತ್ತೆ ಚಿನ್ನ ಕೊಡಲಿಲ್ಲವೆಂದರೆ ಈ ಹಿಂದೆ ನನಗೆ ಕೊಟ್ಟಿರುವ ಆಭರಣದ ವಿಚಾರ ಹಾಗೂ ನನ್ನ ಜೊತೆ ಸುತ್ತಾಡುತ್ತಿರುವ ವಿಚಾರವನ್ನು ನಿನ್ನ ಪಾಲಕರಿಗೆ ತಿಳಿಸುತ್ತೇನೆ ಎಂದು ಆರೋಪಿ ಬ್ಲಾಕ್ ಮೇಲ್ ಮಾಡಿದ್ದಾನೆ. ಈ ಬಗ್ಗೆ ಅಪಪ್ರಚಾರ ಮಾಡುತ್ತೇನೆಂದು ಬೆದರಿಸಿ ಮತ್ತೆ ಆಭರಣ ಸುಲಿಗೆ ಮಾಡಿದ್ದ. ಇದರ ನಡುವೆ ಸ್ನೇಹಿತೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆಕೆಯ ಮನೆಗೆ ಹೋಗಿ ಕಬೋಡ್ನಲ್ಲಿದ್ದ ಲಾಂಗ್ ಚೈನ್ ಕಳವು ಮಾಡಿದ್ದ. ಈ ವಿಚಾರವನ್ನು ತನಿಖೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಡರಾತ್ರಿ ಶುರುವಾಯ್ತು ಗಂಡ-ಹೆಂಡತಿ ಜಗಳ… ಮೂವರ ಕೊಲೆಯಲ್ಲಿ ಅಂತ್ಯ