ಹಿರೇಬಾಗೇವಾಡಿ: ಸಮೀಪದ ಕೆ.ಕೆ.ಕೊಪ್ಪ ಗ್ರಾಮದಲ್ಲಿ ಗ್ರಾಪಂ ಚುನಾವಣೆಯಲ್ಲಿ ಬೆಂಬಲ ನೀಡಿಲ್ಲ ಎಂಬ ಕಾರಣಕ್ಕೆ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ್ದನ್ನು ಖಂಡಿಸಿ ರಸ್ತೆಯಲ್ಲೇ ಶವವಿಟ್ಟು ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.
ಗ್ರಾಪಂ ಚುನಾವಣೆ ಘೋಷಣೆಯಾದ ಬಳಿಕ ಕೆ.ಕೆ.ಕೊಪ್ಪ ಗ್ರಾಮದಲ್ಲಿ ಅಭ್ಯರ್ಥಿಗಳಿಗೆ ಬೆಂಬಲ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯದ ನಡುವೆ ಗದ್ದಲ ಉಂಟಾಗಿತ್ತು. ಈ ನಡುವೆ ಗ್ರಾಮದಲ್ಲಿ ಶನಿವಾರ ಮೃತಪಟ್ಟ ಎಸ್ಟಿ ಸಮುದಾಯದ ವ್ಯಕ್ತಿಯ ಶವ ಸಂಸ್ಕಾರಕ್ಕೆ ಇನ್ನೊಂದು ಸಮುದಾಯದ ಜನರು ಅಡ್ಡಿಪಡಿಸಿದ್ದರಿಂದ ತೀವ್ರ ಗದ್ದಲ ಉಂಟಾಯಿತು.
ಕಳೆದ ಹಲವು ವರ್ಷಗಳಿಂದ ಗ್ರಾಮದ ಹೊರ ವಲಯದಲ್ಲಿರುವ ರುದ್ರಭೂಮಿಯಲ್ಲಿ ಎಸ್ಟಿ ಸಮುದಾಯವದರು ಶವ ಸಂಸ್ಕಾರ ಮಾಡುತ್ತಿದ್ದು, ಆ ಜಾಗ ಇನ್ನೊಂದು ಸಮುದಾಯಕ್ಕೆ ಸೇರಿದ್ದಾಗಿತ್ತು. ಇದೀಗ ಮೃತ ವ್ಯಕ್ತಿ ಕುಟುಂಬದವರು ಚುನಾವಣೆಯಲ್ಲಿ ತಮಗೆ ಬೆಂಬಲಿಸುತ್ತಿಲ್ಲ್ಲ ಎಂಬ ಕಾರಣಕ್ಕೆ ಆ ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಅಡ್ಡಿ ಪಡಿಸಿದ್ದರು. ಇದನ್ನು ಖಂಡಿಸಿ ಎಸ್ಟಿ ಸಮಾಜದವರು ರಸ್ತೆಯಲ್ಲಿ ಶವ ಇಟ್ಟು ಪ್ರತಿಭಟಿಸಿದರು.
ಬಳಿಕ ಗ್ರಾಮದ ಮುಖಂಡರು ಮತ್ತು ಪೊಲೀಸರು ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಿದ್ದಾರೆ. ಬಳಿಕ ರುದ್ರಭೂಮಿಯಲ್ಲಿ ಪೊಲೀಸ್ ಬಂದೋಬಸ್ತ್ ಮೂಲಕ ಶವ ಸಂಸ್ಕಾರ ಮಾಡಲಾಯಿತು.
ಬೆಳಗಾವಿ ತಾಲೂಕಿನ ಕೆ.ಕೆ.ಕೊಪ್ಪ ಗ್ರಾಮದಲ್ಲಿ ರುದ್ರಭೂಮಿ ಸಲುವಾಗಿ ಎರಡು ಸಮುದಾಯಗಳ ನಡುವೆ ಉದ್ಭವಿಸಿದ್ದ ಸಮಸ್ಯೆ ಬಗೆಹರಿಸಲಾಗಿದೆ. ಶವ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದವರು ಪೊಲೀಸರ ಸಮ್ಮುಖದಲ್ಲಿ ಸಂಸ್ಕಾರಕ್ಕೆ ಸಮ್ಮತಿ ಸೂಚಿಸಿದ್ದಾರೆ. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.
| ಡಾ. ಕೆ.ತ್ಯಾಗರಾಜನ್ ನಗರ ಪೊಲೀಸ್ ಆಯುಕ್ತ, ಬೆಳಗಾವಿ