ನವದೆಹಲಿ: ಜನರ ಗುಂಪೊಂದು ಆಮ್ ಆದ್ಮಿ ಪಾರ್ಟಿಯ ಶಾಸಕ ಗುಲಾಬ್ ಸಿಂಗ್ ಯಾದವ್ ಅವರಿಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮುಂಬರುವ ದೆಹಲಿ ಪಾಲಿಕೆ ಚುನಾವಣೆಗಾಗಿ ಎಎಪಿ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದು, ಇದರಿಂದ ಆಕ್ರೋಶಗೊಂಡಿರುವ ಕಾರ್ಯಕರ್ತರು ಶಾಸಕರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ.
ಈ ಘಟನೆಯ ಬಗ್ಗೆ ಶಾಸಕ ಗುಲಾಬ್ ಸಿಂಗ್ ಯಾದವ್ ಆಗಲಿ ಅಥವಾ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಗಲಿ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ದೆಹಲಿಯ ಮಟಿಯಾಲ ಕ್ಷೇತ್ರವನ್ನು ಯಾದವ್ ಪ್ರತಿನಿಧಿಸುತ್ತಾರೆ. ನಿನ್ನೆ ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಶ್ಯಾಮ್ ವಿಹಾರ ಏರಿಯಾದಲ್ಲಿ ಕಾರ್ಯಕರ್ತರ ಸಭೆ ನಡೆಸಲಾಯಿತು. ಈ ವೇಳೆ ಜಗಳ ನಡೆದಿದ್ದು, ಶಾಸಕರಿಗೆ ಥಳಿಸಲಾಗಿದೆ.
ಗಲಾಟೆಗೆ ಕಾರಣ ಏನೆಂಬುದು ಇನ್ನು ತಿಳಿದಿಲ್ಲ. ಆದರೆ, ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ ಎನ್ನಲಾಗಿದೆ. ಉದ್ರಿಕ್ತ ಕಾರ್ಯಕರ್ತರು ಶಾಸಕ ಯಾದವ್ರ ಕಾಲರ್ ಹಿಡಿದು ಎಳೆದಾಡಿ ಥಳಿಸಿದ್ದಾರೆ. ಕಾರ್ಯಕರ್ತರ ಕೈಯಿಂದ ಬಿಡಿಸಿಕೊಳ್ಳಲು ಯಾದವ್ ಹೆಣಗಾಡಿದ್ದಲ್ಲದೆ, ತಪ್ಪಿಸಿಕೊಂಡು ಓಡಿದರೂ ಬಿಡದೇ ಬಡಿದಿದ್ದಾರೆ. ಕೊನೆಗೂ ಹೇಗೋ ಶಾಸಕ ಯಾದವ್ ಅಲ್ಲಿಂದ ಪರಾರಿಯಾದರು.
ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಬಿಜೆಪಿ ನಾಯಕ ಸಂಬಿತ್ ಪಾತ್ರ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪ್ರಾಮಾಣಿಕ ರಾಜಕಾರಣ ಎಂಬ ನಾಟಕದಲ್ಲಿ ತೊಡಗಿದ ಪಕ್ಷದಿಂದ ಅಭೂತಪೂರ್ವ ದೃಶ್ಯಗಳು. ಎಎಪಿಯ ಭ್ರಷ್ಟಾಚಾರದಿಂದ ಬೇಸತ್ತು ಅವರ ಪಕ್ಷದ ಸದಸ್ಯರೇ ಅವರ ಶಾಸಕರನ್ನು ಉಳಿಸುತ್ತಿಲ್ಲ! ಮುಂಬರುವ ಎಂಸಿಡಿ ಚುನಾವಣೆಯಲ್ಲಿ ಇದೇ ರೀತಿಯ ಫಲಿತಾಂಶವು ಅವರಿಗೆ ಕಾಯುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
Unprecedented scenes from the party that indulged in the theatrical drama of ‘honest politics’.
Such is AAP’s corruption that even their members are not sparing their MLAs!
A similar outcome awaits them in upcoming MCD polls. pic.twitter.com/ig9rKuKl82
— Sambit Patra (@sambitswaraj) November 21, 2022
ಟಿಕೆಟ್ ಮಾರಾಟ ಆರೋಪದ ಮೇಲೆ ಎಎಪಿ ಕಾರ್ಯಕರ್ತರು ಯಾದವ್ ಅವರನ್ನು ಥಳಿಸಿದ್ದಾರೆ ಎಂದು ಬಿಜೆಪಿಯ ದೆಹಲಿ ಘಟಕ ಆರೋಪಿಸಿದೆ. ಬಿಜೆಪಿ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ಯಾದವ್, ಬಿಜೆಪಿ ಆರೋಪವನ್ನು ತಳ್ಳಿಹಾಕಿದೆ.
ಬಿಜೆಪಿಗೆ ಹುಚ್ಚು ಹಿಡಿದಿದ್ದು, ಟಿಕೆಟ್ ಮಾರಾಟದ ಆಧಾರ ರಹಿತ ಆರೋಪ ಮಾಡುತ್ತಿದೆ. ನಾನೀಗ ಛಾವ್ಲಾ ಪೊಲೀಸ್ ಠಾಣೆಯಲ್ಲಿದ್ದೇನೆ. ಬಿಜೆಪಿಯ ಕಾರ್ಪೊರೇಟರ್ ಮತ್ತು ಈ ವಾರ್ಡಿನ ಬಿಜೆಪಿ ಅಭ್ಯರ್ಥಿ, ಆ ಜನರನ್ನು (ತನ್ನ ಮೇಲಿನ ದಾಳಿಕೋರರನ್ನು) ರಕ್ಷಿಸಲು ಪೊಲೀಸ್ ಠಾಣೆಯಲ್ಲಿ ಹಾಜರಿರುವುದನ್ನು ನಾನು ನೋಡಿದ್ದೇನೆ. ಇದಕ್ಕಿಂತ ದೊಡ್ಡ ಪುರಾವೆ ಏನಿದೆ? ಮಾಧ್ಯಮಗಳು ಕೂಡ ಇಲ್ಲಿವೆ ಎಂದು ತಿರುಗೇಟು ನೀಡಿದ್ದಾರೆ.
ನನ್ನ ಮೇಲೆ ಹಲ್ಲೆ ಮಾಡಿದ್ದು ಬಿಜೆಪಿಯವರೇ ಎಂದು ಯಾದವ್ ಅವರು ಆರೋಪ ಮಾಡಿದ್ದಾರೆ. ಇಂದು ಮುಂಜಾನೆಯಷ್ಟೇ ಎಎಪಿ ನಾಗರಿಕ ಚುನಾವಣೆಗೆ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದೆ ಎಂದು ಸಾಬೀತುಪಡಿಸುವ ವಿಡಿಯೋ ತುಣುಕುಗಳನ್ನು ಬಿಜೆಪಿ ಬಿಡುಗಡೆ ಮಾಡಿತ್ತು. ವಾಯವ್ಯ ದೆಹಲಿಯ ಎಎಪಿ ಕಾರ್ಯಕರ್ತರೊಬ್ಬರ ಬಳಿ ಟಿಕೆಟ್ಗಾಗಿ 80,000 ರೂಪಾಯಿ ಪಾವತಿಸುವಂತೆ ಕೇಳಿದಾಗ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ಸಂಬಿತ್ ಪಾತ್ರ ಸುದ್ದಿಗಾರರಿಗೆ ತಿಳಿಸಿದರು. ಎಎಪಿಯ 110 ಟಿಕೆಟ್ಗಳನ್ನು ಹಣಕ್ಕಾಗಿ ವಿತರಿಸಲು ಕಾಯ್ದಿರಿಸಲಾಗಿದೆ ಎಂದು ವಿಡಿಯೋ ಮೂಲಕ ಬಿಜೆಪಿ ಕುಟುಕಿದೆ.
ಸದ್ಯ ಮುಂಬರುವ ವಿಧಾನಸಭಾ ಚುನಾವಣೆಗೆ ಗುಜರಾತ್ನಲ್ಲಿ ಪ್ರಚಾರ ನಡೆಸುತ್ತಿರುವ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿಯ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಬಿಜೆಪಿಯು ಪ್ರತಿದಿನ ಕಾಲ್ಪನಿಕ ಕತೆಗಳನ್ನು ಬಿಡುಗಡೆ ಮಾಡುತ್ತದೆ. ಇದು ಕುಟುಕು ಕಾರ್ಯಾಚರಣೆಯೊಂದಿಗೆ ಹೊರ ಬರುತ್ತಿದೆ. 15 ವರ್ಷಗಳಿಂದ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ನಲ್ಲಿ ಏನು ಮಾಡಿದರು ಎಂದು ದೆಹಲಿಯ ಜನರು ಬಿಜೆಪಿಗರನ್ನು ಕೇಳುತ್ತಿದ್ದಾರೆ. ಆದರೆ, ಅವರ ಬಳಿ ಉತ್ತರವಿಲ್ಲ. ಅಲ್ಲದೆ, ಗುಜರಾತ್ನ ಜನರು ಕೂಡ 27 ವರ್ಷಗಳಲ್ಲಿ ಏನು ಮಾಡಿದರು ಎಂದು ಕೇಳುತ್ತಿದ್ದಾರೆ. ಅದಕ್ಕೂ ಕೂಡ ಅವರಲ್ಲಿ ಉತ್ತರವಿಲ್ಲ ಎಂದು ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ. (ಏಜೆನ್ಸೀಸ್)
ಮಾಜಿ ರಾಜ್ಯಸಭಾ ಸದಸ್ಯ, ಶಿಕ್ಷಣ ತಜ್ಞ ಅಬ್ದುಲ್ ಸಮಾದ್ ಸಿದ್ದಿಕಿ ವಿಧಿವಶ: ರಾಯಚೂರಿನಲ್ಲಿ ಅಂತ್ಯಕ್ರಿಯೆ
https://www.vijayavani.net/sonakshi-sinha-says-yes-to-balakrishnas-film/ಬ