ನವದೆಹಲಿ: ಒಮಿಕ್ರಾನ್ ಅಪಾಯಕಾರಿಯಲ್ಲ ಎಂದು ಹೇಳಲಾಗುತ್ತಿದ್ದ ಸನ್ನಿವೇಶ ಇದೀಗ ಬದಲಾಗಿದ್ದು, ಒಮಿಕ್ರಾನ್ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಸೂಚಿಸುವ ಎಚ್ಚರಿಕೆಯ ಸಲಹೆ-ಕಿವಿಮಾತುಗಳು ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿವೆ.
ದಿನೇದಿನೆ ಒಮಿಕ್ರಾನ್ ಜಗತ್ತಿನಾದ್ಯಂತ ವ್ಯಾಪಿಸುತ್ತಿದ್ದು, ಸೋಂಕು ಕಾಣಿಸಿಕೊಂಡಿರುವ ದೇಶಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ. ರಾಜ್ಯದಲ್ಲೂ ಕಳೆದ ಕೆಲವು ದಿನಗಳಿಂದ ಒಮಿಕ್ರಾನ್ ತೀವ್ರಗತಿಯಲ್ಲಿ ಹರಡುತ್ತಿದೆ. ರಾಜ್ಯದಲ್ಲಿ ಒಂದರ ಹಿಂದೊಂದರಂತೆ ಹರಡುತ್ತಿರುವ ಒಮಿಕ್ರಾನ್, ನಿನ್ನೆಯಷ್ಟೇ ಉಡುಪಿ ಜಿಲ್ಲೆಗೂ ಪ್ರವೇಶಿಸಿದೆ.
ಇಂದು ಒಮಿಕ್ರಾನ್ ಕುರಿತಂತೆ ಕೇಂದ್ರ ಮತ್ತಷ್ಟು ಎಚ್ಚೆತ್ತಿದ್ದು, ಎಲ್ಲ ರಾಜ್ಯಗಳಿಗೂ ಮುಂಜಾಗ್ರತೆ ವಹಿಸುವಂತೆ ವಿಶೇಷವಾಗಿ ಸೂಚನೆ ನೀಡಿದೆ. ಈ ಹಿಂದೆಯೇ ಕಾಣಿಸಿಕೊಂಡಿರುವ ಕರೊನಾ ರೂಪಾಂತರಿ ವೈರಸ್ ಡೆಲ್ಟಾಗಿಂತಲೂ ಒಮಿಕ್ರಾನ್ ಮೂರು ಪಟ್ಟು ಹೆಚ್ಚು ಹರಡಬಲ್ಲದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಎಚ್ಚರಿಕೆಯನ್ನು ನೀಡಿದೆ.
ಮಾತ್ರವಲ್ಲ, ಜಿಲ್ಲಾಮಟ್ಟದಲ್ಲೇ ಕೋವಿಡ್/ಒಮಿಕ್ರಾನ್ ಬಗ್ಗೆ ಹೆಚ್ಚಿನ ಗಮನವಹಿಸಿ. ಅಲ್ಲದೆ, ಪರಿಸ್ಥಿತಿ ಬಿಗಡಾಯಿಸಿದರೆ ಅಗತ್ಯ ಬೀಳುವ ಔಷಧ, ವೈದ್ಯಕೀಯ ಪರಿಕರ, ಆಸ್ಪತ್ರೆ ವ್ಯವಸ್ಥೆ, ಸಿಬ್ಬಂದಿ ಲಭ್ಯತೆ ಎಲ್ಲವುಗಳ ಬಗ್ಗೆ ನಿಗಾ ಇರಿಸಿ ಸೂಕ್ತ ವ್ಯವಸ್ಥೆ ಮಾಡಿಟ್ಟುಕೊಂಡಿರಿ ಎಂಬುದಾಗಿ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲ ರಾಜ್ಯಗಳಿಗೆ ಪತ್ರ ಮುಖೇನ ತಿಳಿಸಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿಗೇ ಶಾಪ ಹಾಕಿದ ಸ್ವಾಮೀಜಿ: ಒಂದೇ ತಿಂಗಳಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರಂತೆ ಬೊಮ್ಮಾಯಿ!
ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ಒಮಿಕ್ರಾನ್ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಸದ್ಯ ಭಾರತದಲ್ಲಿ 200 ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ಜಾಸ್ತಿ ಪ್ರಕರಣಗಳು ಕಂಡುಬಂದಿವೆ.
ಮೂರು ವರ್ಷದ ಅವಳಿ ಮಕ್ಕಳ ಸಾವಿನ ಬೆನ್ನಿಗೆ ತಾಯಿಯೂ ನಿಧನ; ತಂದೆ ಇನ್ನೂ ಆಸ್ಪತ್ರೆಯಲ್ಲಿ…