ಮಸ್ಕತ್: ಒಮಾನ್ ರಾಜಧಾನಿ ಮಸ್ಕತ್ನಲ್ಲಿ ಇತ್ತೀಚೆಗೆ ನಡೆದ 16ನೇ ವಿಶ್ವ ಕನ್ನಡ ಸಮ್ಮೇಳನ ಯಶಸ್ವಿಯಾಗಿದ್ದು, ಸಮ್ಮೇಳನಕ್ಕಾಗಿ ಮಸ್ಕತ್ಗೆ ಬಂದಿದ್ದ ಕನ್ನಡಿಗರನ್ನು ಸ್ಥಳೀಯ ಕನ್ನಡ ಸಂಘದವರು ಆತ್ಮೀಯವಾಗಿ ಉಪಚರಿಸಿದರು. ಅದರಲ್ಲೂ ವಿಶೇಷವಾಗಿ 20 ವರ್ಷಗಳಿಂದ ಮಸ್ಕತ್ ನಲ್ಲಿ ಶರಣ ಸಾಹಿತ್ಯ ಪ್ರಸಾರ ಮತ್ತು ಬಸವತತ್ವ ಪ್ರಸಾರಕ್ಕಾಗಿ ಶ್ರಮಿಸುತ್ತಿರುವ ಬಸವಬಳಗ ಪದಾಧಿಕಾರಿಗಳು ಕನ್ನಡ ನಾಡಿನ ಕವಿಗಳನ್ನು ಸನ್ಮಾನಿಸಿದರು.
16 ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಲಾಗಿದ್ದ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ, ವಚನ ಸಾಹಿತ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಾದ ಡಾ. ಅರ್ಚನ ಅಥಣಿ, ಡಾ. ಅಶೋಕ್ ನರೋಡೆ, ಯುವ ಸಾಹಿತಿ ಹಾಗೂ ಪತ್ರಕರ್ತ ಪ್ರಶಾಂತ್ ರಿಪ್ಪನ್ಪೇಟೆ ಅವರಿಗೆ ಬಸವ ಬಳಗದ ಪರವಾಗಿ ಒಮಾನ್ ರಾಷ್ಟ್ರದ ರಾಷ್ಟ್ರಲಾಂಛನವನ್ನು ನೀಡಿ ಸನ್ಮಾನಿಸಿದರು.
ಈ ವೇಳೆ ಬಳಗದ ಪದಾಧಿಕಾರಿಗಳಾದ ರೇಣುಕಾಮೂರ್ತಿ, ಶಿವಯೋಗಿ ಜವಳಗದ್ಧಿ , ಶಿವಕುಮಾರ್ ಕೆಂಚನಗೌಡ್ರ , ನಂದೀಶ್, ಡಾ. ನಿರ್ಮಲ ಅಮರೇಶ್, ಮಂಜುನಾಥ್ ಸಂಘಟಿ, ಬಸನಗೌಡ ಬಿರಾದಾರ್ ಹಾಗೂ ವಿಶ್ವ ಕನ್ನಡ ಸಮ್ಮೇಳನದ ಆಯೋಜಕರಾದ ಮಂಜುನಾಥ್ ಸಾಗರ್ ಮತ್ತಿತರ ಕನ್ನಡ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.