ಅರಸೀಕೆರೆ: ಭಾರತೀಯ ಸಂಸ್ಕೃತಿ, ಪರಂಪರೆ ರಕ್ಷಣೆಗೆ ಯುವ ಸಮುದಾಯ ಪಣ ತೊಡಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ನಾರಾಯಣ್ ಹೇಳಿದರು.
ನಗರದ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕ್ರೀಡೆ, ಎನ್ಎಸ್ಎಸ್ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ ಬೆಳೆದಂತೆ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿಯ ಮನೋಭಾವ ಹೆಚ್ಚಬೇಕು. ಈ ನಿಟ್ಟಿನಲ್ಲಿ ಹಚ್ಚಿನ ಅಧ್ಯಯನಕ್ಕೆ ಒತ್ತು ನೀಡುವ ಅಗತ್ಯವಿದೆ ಎಂದು ತಿಳಿಸಿದರು.
ಜ್ಞಾನಾರ್ಜನೆ ಜತೆಗೆ ಗುರು, ಹಿರಿಯರನ್ನು ಗೌರವ ಭಾವನೆಯಿಂದ ಕಾಣಬೇಕು. ವಿದ್ಯಾವಂತರ ಸಂಖ್ಯೆ ವೃದ್ಧಿಯಾದಂತೆ ವೃದ್ಧಾಶ್ರಮಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಶಿಕ್ಷಣದ ಜತೆಗೆ ಬದುಕಿನ ಮೌಲ್ಯ ತಿಳಿಹೇಳುವ ಪಾಲಕರನ್ನು ನಿರ್ಲಕ್ಷಿಸುತ್ತಿರುವುದು ಸರಿಯಲ್ಲ. ಯುವ ಸಮುದಾಯ ಇಂತಹ ಮನೋಭಾವನೆಯಿಂದ ಹೊರಬರುವುದರ ಜತೆಗೆ ಭಾರತೀಯ ಸನಾತನ ಸಂಸ್ಕೃತಿಯ ಉಳಿವಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಭಾಷಾ ಉಪನ್ಯಾಸ ನೀಡಿದರು. ಪ್ರಾಧ್ಯಾಪಕರಾದ ಡಾ.ಹರೀಶ್ ಕುಮಾರ್, ಪ್ರೊ.ಉಷಾ, ಡಾ.ಭಾಸ್ಕರ್, ಸುಬ್ರಮಣ್ಯ ರಾಜೇಶ್ ಖನ್ನಾ ಇತರರು ಇದ್ದರು.