ದೊಡ್ಡಬಳ್ಳಾಪುರ: ನಗರದ ಕೃಷಿ ಇಲಾಖೆ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಜಿ.ಎಸ್. ಜಯಸ್ವಾಮಿ ರೈತರೊಂದಿಗೆ ಕುಂದು-ಕೊರತೆ ಸಭೆ ನಡೆಸಿ, ಕೃಷಿಕರ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದರು.
ರಾಜ್ಯಾದ್ಯಂತ ಈಗಾಗಲೇ ಮುಂಗಾರು ಮಳೆ ಆರಂಭವಾಗಿದ್ದು, ರೈತರು ಬಿತ್ತನೆ ಕಾರ್ಯ ಶುರು ಮಾಡಿದ್ದಾರೆ. ಜಿಲ್ಲೆಯಲ್ಲೂ ಕೃಷಿ ಚಟುವಟಿಕೆ ಗರಿಗೆದರಿದ್ದು, ಬಿತ್ತನೆ ಬೀಜವನ್ನು ಸರ್ಕಾರದ ನಿರ್ದೇಶನದಂತೆ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರೈತರಿಂದ ಬೇಡಿಕೆ ಹೆಚ್ಚಾಗಿರುವುದರಿಂದ ಹಾಲಿ ನೀಡುತ್ತಿದ್ದ 7.5 ಕೆಜಿ ಬಿತ್ತನೆ ಬೀಜದ ಜತೆಗೆ ಹೆಚ್ಚುವರಿ ಎರಡೂವರೆ ಕೆಜಿ ನೀಡಲಾಗುತ್ತಿದೆ. ಇದಕ್ಕೆ ಸಬ್ಸಿಡಿ ಇಲ್ಲ ಎಂದರು.
ಬೆಳೆಯನ್ನು ಬಾಧಿಸುತ್ತಿರುವ ಲದ್ದಿಹುಳು ತಡೆಗೆ ಕೃಷಿ ವಿವಿಯ ವಿಜ್ಞಾನಿಗಳ ನಿರ್ದೇಶನದಂತೆ ಆಕರ್ಷಕ ಬಲೆ ಸೃಷ್ಟಿಸಿ ಕೀಟ ಬಾಧೆ ತಡೆಗಟ್ಟುವಂತೆ ಸಲಹೆ ನೀಡಿದರು.
ಅಧಿಕಾರಿಗಳ ಬೇಜವಾಬ್ದಾರಿಯಿಂದ ಎಫ್ಐಡಿ ತಂತ್ರಾಂಶದಲ್ಲಿ ರೈತರ ಮಾಹಿತಿಯನ್ನು ಸರಿಯಾದ ಕ್ರಮದಲ್ಲಿ ಅಪ್ಲೋಡ್ ಮಾಡುತ್ತಿಲ್ಲ. ಇದರಿಂದ ಸರ್ಕಾರದ ಸೌಲಭ್ಯಗಳು ರೈತರಿಗೆ ತಲುಪುತ್ತಿಲ್ಲ, ತೂಬಗೆರೆ ಹೋಬಳಿಯಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳೇ ಇಲ್ಲ. ನರೇಗಾ ಯೋಜನೆಯಲ್ಲಿ ಸಿಗುವ ಸೌಕರ್ಯಗಳೂ ರೈತರಿಗೆ ದೊರಕುತ್ತಿಲ್ಲ ಎಂದು ರಾಜ್ಯ ರೈತ ಸಂಘ ಸದಸ್ಯ ಸತೀಶ್ ಕುಮಾರ್ ಗಮನ ಸೆಳೆದರು.
ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಪ್ರಸನ್ನ, ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಇದ್ದರು.