ರಾಯಚೂರು: ನಗರದ ಗದ್ವಾಲ್ ರಸ್ತೆಯಲ್ಲಿರುವ ಅಂಬೇಡ್ಕರ್ ವೃತ್ತಿಪರ ವಸತಿ ನಿಲಯದಲ್ಲಿರುವ ಆಡಳಿತ ಮಂಡಳಿ ಕೋಟಾದಲ್ಲಿ ಕಾಲೇಜು ಪ್ರವೇಶ ಪಡೆದಿರುವ ವಿದ್ಯಾರ್ಥಿನಿಯರನ್ನು ವಸತಿ ನಿಲಯದಿಂದ ಹೊರಹೊಗುವಂತೆ ಮಾಡಿರುವ ಆದೇಶವನ್ನು ರದ್ದು ಪಡಿಸುವಂತೆ ಒತ್ತಾಯಿಸಿ ಸ್ಥಳೀಯ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂದೆ ವಿದ್ಯಾರ್ಥಿನಿಯರು ಬುಧವಾರ ಪ್ರತಿಭಟನೆ ನಡೆಸಿದರು.
ವಸತಿ ನಿಲಯದ ಮೇಲ್ವಿಚಾರಕಿ ಆಡಳಿತ ಮಂಡಳಿ ಕೋಟಾದಲ್ಲಿ ಕಾಲೇಜು ಪ್ರವೇಶ ಪಡೆದ ವಿದ್ಯಾರ್ಥಿನಿಯರು ಮೇ 25ರೊಳಗೆ ವಸತಿ ನಿಲಯದಿಂದ ಹೊರಹೋಗುವಂತೆ ಆದೇಶ ಮಾಡಿದ್ದು, ಇದರಿಂದ ಬಡ ವಿದ್ಯಾರ್ಥಿನಿಯರು ಬೀದಿ ಪಾಲಾಗುವಂತಾಗಿದೆ.
ವಸತಿ ನಿಲಯದಲ್ಲಿ ಗ್ರಂಥಾಲಯದ ವ್ಯವಸ್ಥೆಯಿಲ್ಲ. ಸಮರ್ಪಕ ಊಟವನ್ನು ನೀಡುವುದಿಲ್ಲ. ಸ್ವಚ್ಛತೆ ಕಾರ್ಯ ನಡೆಸುವುದಿಲ್ಲ. ವಸತಿ ನಿಲಯದಲ್ಲಿ ನೀರಿನ ಸಮಸ್ಯೆಯಿದ್ದು, ಇದರಿಂದ ವಿದ್ಯಾರ್ಥಿನಿಯರು ಸ್ನಾನಕ್ಕೂ ಸಮಸ್ಯೆ ಎದುರಿಸುವಂತಿದೆ.
ಏಕಾಏಕಿ ವಿದ್ಯಾರ್ಥಿನಿಯರು ವಸತಿನಿಲಯದಿಂದ ಹೊರಹೋಗುವಂತೆ ಹೇಳಿರುವುದರಿಂದ ವಿದ್ಯಾರ್ಥಿನಿಯರು ಶಿಕ್ಷಣವನ್ನು ಅರ್ಧಕ್ಕೆ ಕೈಬಿಡುವಂತಾಗಲಿದೆ. ಕೂಡಲೇ ವಿದ್ಯಾರ್ಥಿನಿಯರು ವಸತಿ ನಿಲಯದಲ್ಲಿ ಇರಲು ಅವಕಾಶ ಕಲ್ಪಿಸಬೇಕು ಎಂದು ವಿದ್ಯಾರ್ಥಿನಿಯರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿಯರಾದ ಸೌಮ್ಯ, ಶಶಿಕಲಾ, ಸುಷ್ಮಾ, ಸುಮಂಗಲ, ಮಲ್ಲಮ್ಮ, ನೀಲಮ್ಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ವಸತಿ ನಿಲಯದಲ್ಲಿ ಇರಲು ಅವಕಾಶ ನೀಡಿ
ರಾಯಚೂರಿನ ಮಾವಿನಕೆರೆ ಬಳಿಯಿರುವ ಸಮಾಜ ಕಲ್ಯಾಣ ಇಲಾಖೆ ಮುಂದೆ ಅಂಬೇಡ್ಕರ್ ವೃತ್ತಿಪರ ವಸತಿ ನಿಲಯದ ವಿದ್ಯಾರ್ಥಿನಿಯರು ಬುಧವಾರ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿನಿಯರಾದ ಸೌಮ್ಯ, ಶಶಿಕಲಾ, ಸುಷ್ಮಾ, ಸುಮಂಗಲ, ಮಲ್ಲಮ್ಮ, ನೀಲಮ್ಮ ಇದ್ದರು.