ಹೊಳೆನರಸೀಪುರ: ವಸಂತೋತ್ಸವ ಪ್ರಯುಕ್ತ ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಮಂಗಳವಾರ ಓಕುಳಿ ಸಂಭ್ರಮದಿಂದ ನಡೆಯಿತು.
ಬ್ರಾಹ್ಮಿ ಮಹೂರ್ತದಲ್ಲಿ ಮೂಲಮೂರ್ತಿಗೆ ಪಂಚಾಮೃತ ಅಭಿಷೇಕ, ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿದ ನಂತರ ದೇವಾಲಯದ ಪ್ರಾಂಗಣದಲ್ಲಿ ಸಂಪ್ರದಾಯದಂತೆ ತೀರ್ಥ ಸ್ನಾನದ ಪೂಜಾ ಮಹೋತ್ಸವ ನೆರವೇರಿಸಲಾಯಿತು. ಬಳಿಕ ಮೂರ್ತಿಗಳು ಹಾಗೂ ಭಕ್ತರಿಗೆ ತೀರ್ಥ ಸ್ನಾನದ ತೀರ್ಥ ಸಂಪ್ರೋಕ್ಷಿಸಲಾಯಿತು. ರಾಜಬೀದಿ ಉತ್ಸವದಲ್ಲಿ ಓಕುಳಿ ಆಚರಿಸಿದ ನಂತರ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಹಿರಿಯ ಆಗಮಿಕರಾದ ಅಕ್ಕಿಹೆಬ್ಬಾಳ್ ಶ್ರೀಧರ್ಭಟ್ ಮಾತನಾಡಿ, ಲೋಕ ಕಲ್ಯಾಣಾರ್ಥವಾಗಿ ಸಂಪ್ರದಾಯದಂತೆ ಮಾ. 24 ರಂದು ಬ್ರಹ್ಮರಥೋತ್ಸವ ನಡೆದಿದೆ. ಪೂಜಾ ಮಹೋತ್ಸವದ 9ನೇ ದಿನವಾದ ಮಂಗಳವಾರ ವಸಂತೋತ್ಸವ ಪ್ರಯುಕ್ತ ಅವಬೃತ ಹಾಗೂ ತೀರ್ಥ ಸ್ನಾನ, ಓಕುಳಿ ನಡೆದಿದೆ ಎಂದರು.
ಹಿರಿಯ ಅರ್ಚಕರಾದ ರಾಮಸ್ವಾಮಿಭಟ್ ಮಾರ್ಗದರ್ಶನದಲ್ಲಿ ಹಿರಿಯ ಆಗಮಿಕರಾದ ರಾಮಪ್ರಸಾದ್, ಆನೆಕನ್ನಂಬಾಡಿ ರವಿ, ನಾಗರಾಜು, ಅನಂತಪ್ರಸಾದ್, ವಿಜಯಕುಮಾರ್, ವೆಂಕಟೇಶ್, ಪೂಜಾ ಕೈಂಕರ್ಯ ನೆರವೇರಿಸಿದರು.