ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಬರೋಬ್ಬರಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಾವಿಗೀಡಾಗಿರುವ ಸುದ್ದಿ ಅರಗಿಸಿಕೊಳ್ಳಲು ನಾಡಿನ ಜನತೆಗೆ ಕಷ್ಟವಾಗಿದೆ. ಈ ಮಧ್ಯೆ ಅರ್ಜುನ ಆನೆಯ ಸಾವಿನ ಬಗ್ಗೆ ನಾನಾ ಅನುಮಾನಗಳು ಮೂಡುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಅರ್ಜುನ ಸಾವಿನ ಬಗ್ಗೆ ಸರಿಯಾದ ತನಿಖೆಯಾಗಲಿ ಎಂದು ಜನರು ಆಗ್ರಹಿಸುತ್ತಿದ್ದಾರೆ. ಏತನ್ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಅರ್ಜುನ ಸಾವಿನ ಬಗ್ಗೆ ತನಿಖೆ ಮಾಡಲು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಇಂದು ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಅರ್ಜುನ 8 ಬಾರಿ ಅಂಬಾರಿ ಹೊತ್ತಿದ್ದಾರೆ. ಅವರು ಸಾವಿಗೀಡಾಗಿರುವುದು ದುರಂತದ ವಿಷಯ. ಅದು ಇನ್ನು ಬದುಕಿ ಬಾಳಬೇಕಾದ ಆನೆ. ಅದನ್ನು ಇನ್ನೊಂದು ಆನೆ ಹಿಡಿಯಲಿಕ್ಕೆ ಬಳಸಿದುದದರ ಬಗ್ಗೆ ತನಿಖೆ ಮಾಡಿ ಅಂತ ಹೇಳಿದ್ದೇನೆ. ಅದರ ಬಗ್ಗೆ ಸಂಪೂರ್ಣ ವಿಚಾರ ಬಂದ ಮೇಲೆ ಪ್ರಸ್ತಾಪ ಮಾಡ್ತೇನೆ. ಆದರೆ ಅರ್ಜುನ ಆನೆ ಸಕಲೇಶಪುರದಲ್ಲಿ ಎಲ್ಲಿ ಪ್ರಾಣ ಕಳೆದುಕೊಂಡಿತು ಅಲ್ಲಿ ಒಂದು ಸ್ಮಾರಕ ಮಾಡಲು ಹಾಗೂ ಹೆಗ್ಗಡದೇವನಕೋಟೆಯಲ್ಲಿ ಸಹ ಸ್ಮಾರಕ ಮಾಡಬೇಕು ಹೇಳಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಕಾಡಾನೆ ಅರ್ಜುನನ ಮೇಲೆ ದಾಳಿ ಮಾಡಿದೆ. ಘಟನೆಯಲ್ಲಿ ಅರ್ಜುನ ಆನೆ ಮೃತಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಸ್ಥಳೀಯರು ಮಾತ್ರ ಅರಣ್ಯಾಧಿಕಾರಗಳ ಎಡವಟ್ಟಿನಿಂದ ಅರ್ಜುನನ ಸಾವಾಗಿದೆ ಎಂದು ಹೇಳುತ್ತಿದ್ದಾರೆ. ನಿನ್ನೆಯಷ್ಟೇ ಅರ್ಜುನನ ಸಾವಿನ ಕುರಿತು ಕಾವಾಡಿಗರು ಮಾತನಾಡಿಕೊಳ್ಳುತ್ತಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು.
22 ವರ್ಷಗಳ ಕಾಲ ವಿಶ್ವವಿಖ್ಯಾತ ದಸರಾದಲ್ಲಿ ಭಾಗವಹಿಸಿದ್ದ ಸಾಕಾನೆ ಅರ್ಜುನ 8 ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ. ಈ ಬಾರಿ ಜಂಬೂಸವಾರಿಯಲ್ಲಿಯೂ ನಿಶಾನೆ ಆನೆಯಾಗಿ ಅರ್ಜುನ ಭಾಗಿಯಾಗಿದ್ದ. ಆನೆಗೆ 65 ವರ್ಷ ವಯಸ್ಸಾಗಿತ್ತು. 288ಮೀ ಎತ್ತರ, 5800 ರಿಂದ 6000 ಕೆ.ಜಿ. ತೂಕ ಇರುವುದು ಇತ್ತೀಚೆಗೆ ದಸರಾದಲ್ಲಿ ಭಾಗವಹಿಸಿದ್ದ ಸಂದರ್ಭ ಗೊತ್ತಾಗಿತ್ತು.
“ಎದ್ದೇಳೋ ಅರ್ಜುನ, ನನ್ನ ಆನೆ ಬದುಕಿಸಿಕೊಡಿ….” ಬಿಕ್ಕಿ ಬಿಕ್ಕಿ ಅತ್ತ ಮಾವುತ ವಿನು