ನವದೆಹಲಿ: ಬಡ್ತಿ ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಸಂಬಂಧಿಸಿ ಸೋಮವಾರ ಲೋಕಸಭೆಯಲ್ಲಿ ಹೇಳಿಕೆ ನೀಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್ಚಂದ್ ಗೆಹ್ಲೋಟ್ ವಿರುದ್ಧ ಸಂಸತ್ತಿನ ದಾರಿ ತಪ್ಪಿಸಲು ಯತ್ನಿದ್ದಾರೆ ಎಂಬ ಆರೋಪವನ್ನು ಕಾಂಗ್ರೆಸ್ ಹೊರಿಸಿದೆ. ಅಷ್ಟೇ ಅಲ್ಲ, ಅವರ ವಿರುದ್ಧ ಲೋಕಸಭೆಯಲ್ಲಿ ಹಕ್ಕುಚ್ಯುತಿ ಮಂಡನೆಗೆ ನೋಟಿಸ್ ಕೂಡ ನೀಡಿದೆ.
ಸಚಿವ ಗೆಹ್ಲೋಟ್ ಲೋಕಸಭೆಯಲ್ಲಿ ಹೇಳಿಕೆ ನೀಡಿದ ಕೂಡಲೇ ಸಭಾತ್ಯಾಗ ಮಾಡಿ ಕಾಂಗ್ರೆಸ್ ಸದಸ್ಯರು ಕಲಾಪವನ್ನು ಬಹಿಷ್ಕರಿಸಿದ್ದರು. ಅಲ್ಲದೆ, ಗೆಹ್ಲೋಟ್ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಹೇಳಿದ್ದರು.
ಲೋಕಸಭೆ ಕಲಾಪ ಮಂಗಳವಾರ ಆರಂಭವಾದಾಗ ಸ್ಪೀಕರ್ ಓಂ ಬಿರ್ಲಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಸದಸ್ಯರು ಸಚಿವ ಗೆಹ್ಲೋಟ್ ವಿರುದ್ಧ ಸಲ್ಲಿಸಿರುವ ಹಕ್ಕುಚ್ಯುತಿ ಮಂಡನೆ ನೋಟಿಸ್ ಪರಿಶೀಲನೆಯಲ್ಲಿದೆ ಎಂದು ಸದನಕ್ಕೆ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರಸ್ ವಿವಿಧ ಹಂತಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ. ಮೀಸಲಾತಿ ಕೊನೆಗೊಳಿಸುವ ಮೋದಿ ಸರ್ಕಾರದ ಪಿತೂರಿಯನ್ನು ಜನರ ಎದುರು ಬಯಲು ಮಾಡುವುದಾಗಿ ಹೇಳಿರುವ ಕಾಂಗ್ರೆಸ್ ನಾಯಕರು ಪ್ರತಿಭಟನೆಗೆ ತಯಾರಿ ನಡೆಸಿದ್ದಾರೆ. (ಏಜೆನ್ಸೀಸ್)