ಬೆಂಗಳೂರು: ಕೋವಿಡ್ ಸೋಂಕಿನಿಂದ ಇಡೀ ಜಗತ್ತು ತತ್ತರಿಸುತ್ತಿದೆ. ರಾಜ್ಯ ರಾಜಧಾನಿಯ ನಿವಾಸಿಗಳು ಸೋಂಕು ತಗುಲುವ ಆತಂಕದಲ್ಲೇ ದಿನದೂಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸುಮಾರು 92 ವರ್ಷ ಹಿಂದಿನ ಆದೇಶ ಪ್ರತಿಯೊಂದು ವೈರಲ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ.
ಬೆಂಗಳೂರು ವ್ಯಾಪ್ತಿಯಲ್ಲಿ ನ್ಯುಮೋನಿಯಾ ರೀತಿಯ ಕಾಯಿಲೆ 1918ರಲ್ಲಿ ಕಾಣಿಸಿಕೊಂಡಿತ್ತು. ಅದೇ ಮಾದರಿಯಲ್ಲಿ 1928ರಲ್ಲೂ ಕಾಯಿಲೆ ಕಾಣಿಸಿಕೊಂಡಿದೆ. 1928ರ ಅವಧಿಯಲ್ಲಿ ಆಡಳಿತ ನಡೆಸುತ್ತಿದ್ದ ಬೆಂಗಳೂರು ಸಿಟಿ ಮುನ್ಸಿಪಲ್ ಕೌನ್ಸಿಲ್ನ ಆರೋಗ್ಯ ಅಧಿಕಾರಿ ಜಿ.ವಿ. ಮಸ್ಕರ್ ನೇಹಾಸ್ ಅವರು ಜನರಿಗೆ ಸುತ್ತೋಲೆ ಹೊರಡಿಸಿದ್ದರು. ಈ ಆದೇಶ ಪತ್ರಿ ಸೋಮವಾರ ಜಾಲತಾಣದಲ್ಲಿ ಹರಿದಾಡಿದೆ. ಈ ಆದೇಶ ಪ್ರತಿಯಲ್ಲಿ ನ್ಯೂಮೋನಿಯಾದಿಂದ ಪಾರಾಗಾಲು ಒಂದಷ್ಟು ಸಲಹೆ ನೀಡಲಾಗಿದೆ. ಅದರ ವಿವರ ಇಲ್ಲಿದೆ.
ಇದನ್ನೂ ಓದಿರಿ ಕರೊನಾ ಸೋಂಕು ಸಮುದಾಯಕ್ಕೆ ಹರಡುತ್ತಿದ್ದು, ಪರಿಸ್ಥಿತಿ ಕೈಮೀರುತ್ತಿದೆ…
ನ್ಯೂಮೋನಿಯಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರು ಸಿಟಿ ಮುನ್ಸಿಪಲ್ ಕೌನ್ಸಿಲ್ 1928ರ ಮಾರ್ಚ್ 11ರಂದು ಹೊರಡಿಸಿದ ಆದೇಶ ಪ್ರತಿಯ ಸಾರಾಂಶ ಹೀಗಿದೆ.
‘ಜನರು ಗುಂಪಾಗಿ ಸೇರುವುದು, ಸಿನಿಮಾ ನಾಟಕಗಳಿಗೆ ಹೋಗುವುದನ್ನು ನಿರ್ಬಂಧಿಸಲಾಗಿದೆ. ರಾತ್ರಿ-ಹಗಲು ಒಳ್ಳೆಯ ಗಾಳಿ ಬೀಸುವ ಜಾಗದಲ್ಲಿ ಇರಬೇಕು. ದೇಹ್ಕಕೂ ಮನಸ್ಸಿಗೂ ಅಲ್ಯ ಆಗುವಂತೆ ದುಡಿದು ಕೆಲಸ ಮಾಡಬಾರದು. ಜ್ವರದೊಂದಿಗೆ ಕೂಡಿದ ನೆಗಡಿ, ದೇಹಾಲಸ್ಯ ಕಂಡುಬಂದ ಕೂಡಲೇ ಹಾಸಿಗೆಯಲ್ಲಿ ಮಲಗಬೇಕು. ಕೆಮ್ಮುವವರನ್ನು ಪ್ರತ್ಯೇಕವಾಗಿ ಇಡುವಂತೆ ಹಾಗೂ ಅನಾರೋಗ್ಯ ಉಂಟಾದಲ್ಲಿ ಗಾಳಿ, ಬೆಳಕು ಹೆಚ್ಚಾಗಿರುವ ಕೋಣೆಯಲ್ಲಿ ಮಲಗಿಸಬೇಕು. ಮಲಬದ್ಧತೆ ಅವಕಾಶಕೊಡಬಾರದು. ಬಯಲು ಮಲವಿಸರ್ಜನೆ ಮಾಡದಂತೆ ಹಾಗೂ ಸಮೀಪದಲ್ಲಿ ಆಸ್ಪತ್ರೆ ಇದ್ದಲ್ಲಿ ಹೋಗಿ ಚಿಕಿತ್ಸೆ ಪಡೆದು ಔಷಧ ಸೇವಿಸಬೇಕು’.
‘ತೀವ್ರ ಅನಾರೋಗ್ಯ ಉಂಟಾದಲ್ಲಿ ಲವಂಗ, ಕರಿಮೆಣಸು, ಒಣಶುಂಠಿ, ದಾಲ್ಚಿನ್ನಿ ಹಾಗೂ ಬೆಳ್ಳುಳ್ಳಿ ಸೇರಿಸಿ ಕಾಫಿ ಅಥವಾ ಕಷಾಯ ಮಾಡಿಕೊಂಡು ಕುಡಿಯಬೇಕು’ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿತ್ತು.