ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಮಾಡಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ, ಅಶ್ಲೀಲ ದೃಶ್ಯಗಳುಳ್ಳ ಪೆನ್ ಡ್ರೈವ್ ಹಂಚಿಕೆ ಸೇರಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದರೆ ತಪ್ಪೇನಿಲ್ಲವೆಂದು ಬಿಜೆಪಿ ಮಾಜಿ ಸಚಿವ ವಿ.ಸೋಮಣ್ಣ ಹೇಳಿದರು.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಅಸಹ್ಯ ಹಾಗೂ ನೀಚಕೃತ್ಯ ಯಾರೇ ಮಾಡಿದ್ದರೂ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು. ಪೆನ್ಡ್ರೈವ್ ಹಂಚಿಕೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಂಚಿಕೆ ಆರೋಪದ ಬಗ್ಗೆಯೂ ಎಸ್ಐಟಿ ತನಿಖೆ ನಡೆಸಿ, ಸತ್ಯಾಂಶ ಹೊರಗೆ ಹಾಕುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಪ್ರಕರಣದ ತನಿಖೆಗೆ ಎಸ್ಐಟಿ ರಚಿಸಿದ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಪದೇ ಪದೆ ಮೂಗು ತೂರಿಸಿ ಅನುಮಾನಕ್ಕೆ ಆಸ್ಪದ ನೀಡಬಾರದು. ಗೃಹ ಇಲಾಖೆಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಸ್ತಕ್ಷೇಪ ಸರಿಯಲ್ಲವೆಂದು ವಿ.ಸೋಮಣ್ಣ ಆಕ್ಷೇಪಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಳಂಕರಹಿತ ನಾಯಕರು. ಅವರ ಹೆಸರೆತ್ತಲು ನಮಗೆ ಯೋಗ್ಯತೆ ಬೇಕು. ಸಿಎಂ ಸಿದ್ದರಾಮಯ್ಯಗೆ ಇದೆಲ್ಲ ಗೊತ್ತಿದ್ದೂ ಪ್ರಕರಣದಲ್ಲಿ ದೇವೇಗೌಡರನ್ನು ಎಳೆದು ತರುವ ತಪ್ಪು ಮಾಡಬಾರದು ಎಂದು ಸಲಹೆ ನೀಡಿದರು.
ರಾಹುಲ್ ವಿರುದ್ಧ ವಾಗ್ದಾಳಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಲೆ ಕೆಟ್ಟಿದೆಯಾ ?. 400 ಮಹಿಳೆಯರ ಮೇಲೆ ರೇಪ್ ಆಗಿದೆ ಎಂದು ಹೇಳುತ್ತಾರಲ್ಲ, ಅವರಿಗೆ ಗೊತ್ತಿದೆಯೆ ?. ದಾಖಲೆಗಳಿದ್ದರೆ ಎಸ್ಐಟಿಗೆ ಒಪ್ಪಿಸಲಿ, ಅವರ ಹೆಸರುಗಳನ್ನೆಲ್ಲ ಕೊಡಲಿ ಎಂದು ವಿ.ಸೋಮಣ್ಣ ಒತ್ತಾಯಿಸಿದರು.
ಮಾಜಿ ಪ್ರಧಾನಿಗಳ ಮೊಮ್ಮಗ, ಮಗನಾಗಿ ಮಾತನಾಡುವ ರೀತಿಯೇ ಇದು. ಸಿಎಂಗೆ ಪತ್ರ ಬರೆಯುವುದು, ಉಡಾೆ ಮಾತುಗಳನ್ನಾಡುವುದು ಬಿಡಬೇಕು. ಇಂತಹವರನ್ನು ಕಾಂಗ್ರೆಸ್ ಪ್ರಧಾನಿ ಮಾಡುತ್ತೇವೆ ಎನ್ನುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಬಯಸಿದ ಜನರು, ಈ ಬಾರಿ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡರು. ತುಮಕೂರು ಲೋಕಸಭೆ ಕ್ಷೇತ್ರದ ಜನರ ಬೆಂಬಲ ಹಾಗೂ ಬಿಜೆಪಿ-ಜೆಡಿಎಸ್ ನಾಯಕರು ಒಂದಾಗಿ ಶ್ರಮಿಸಿದ್ದು, ಗೆಲ್ಲುವ ವಿಶ್ವಾಸವಿದೆ ಎಂದು ವಿ.ಸೋಮಣ್ಣ ಹೇಳಿದರು.