ನವದೆಹಲಿ: ರಾಜಸ್ಥಾನ ಮತ್ತು ಛತ್ತೀಸ್ಗಢದ ನಂತರದಲ್ಲಿ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾರಾಷ್ಟ್ರ ವಿಕಾಸ್ ಅಗಡಿಯ (ಎಂವಿಎ) 12 ಶಾಸಕರು ಬಿಜೆಪಿಗೆ ಜಿಗಿದು ರಾಜಕೀಯ ಅಸ್ಥಿರತೆ ಮೂಡಿಸುವ ಹೊಸ ರಾಜಕೀಯ ನಾಟಕ ಆರಂಭವಾಗಿದೆ. ಆದರೆ, ಈ ನಾಟಕ ಸುಳ್ಳು ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಸ್ಪಷ್ಟಪಡಿಸಿದೆ.
ಮಹಾರಾಷ್ಟ್ರ ರಾಜಕೀಯದ ನಾಟಕದಲ್ಲಿ ಎನ್ಸಿಪಿಯ 12 ಶಾಸಕರು ಬಿಜೆಪಿ ಸೇರಲಿದ್ದಾರೆ. ತನ್ಮೂಲಕ ಶಿವಸೇನೆಯ ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರವನ್ನು ಅಸ್ಥಿರಗೊಳಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಇದು ಆಧಾರರಹಿತವಾದ ಹೇಳಿಕೆ. ನಮ್ಮ ಪಕ್ಷದ 12 ಶಾಸಕರು ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಸೇರುವುದಿಲ್ಲ ಎಂದು ಸಚಿವ ಹಾಗೂ ಎನ್ಸಿಪಿ ಮುಖಂಡ ನವಾಬ್ ಮಲಿಕ್ ಸ್ಪಷ್ಟಪಡಿಸಿದ್ದಾರೆ.
ವಾಸ್ತವದಲ್ಲಿ 2019ರ ವಿಧಾನಸಭಾ ಚುನಾವಣೆಗೂ ಮುನ್ನ ಎನ್ಸಿಪಿಯಿಂದ ಬಿಜೆಪಿಗೆ ವಲಸೆ ಹೋಗಿರುವವರು ಇದೀಗ ಎನ್ಸಿಪಿಗೆ ಮರಳಲು ಕಾತರಿಸುತ್ತಿದ್ದಾರೆ. ಹೀಗಿರುವಾಗ ಎನ್ಸಿಪಿಯ ಶಾಸಕರು ಬಿಜೆಪಿಗೆ ಹೋಗುವ ಪ್ರಮೇಯ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ನಿಯಂತ್ರಣಕ್ಕೆ ಸಿಗದ ಕರೊನಾ; ರಾಜ್ಯದಲ್ಲಿ 10 ಸಾವಿರ ದಾಟಿದ ಎರಡನೇ ಜಿಲ್ಲೆ
ಎನ್ಸಿಪಿಯ 12 ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ಯಾರೋ ವದಂತಿ ಹಬ್ಬಿಸುತ್ತಿದ್ದಾರೆ. ಆದರೆ, ಇದೊಂದು ಆಧಾರರಹಿತವಾದ ಮತ್ತು ಕಲ್ಪಿತ ಮಾಹಿತಿಯಾಗಿದೆ. ಚುನಾವಣೆಗೂ ಮುನ್ನ ಎನ್ಸಿಪಿಯಿಂದ ಬಿಜೆಪಿಗೆ ಹೋದವರು ಮಾತೃಪಕ್ಷಕ್ಕೆ ಮರಳಲು ಕಾತರಿಸುತ್ತಿದ್ದಾರೆ. ಅವರನ್ನು ವಾಪಸು ಕರೆಯಿಸಿಕೊಳ್ಳುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಇಂಥ ನಿರ್ಧಾರ ಕೈಗೊಂಡಾಗ ಖಂಡಿತವಾಗಿಯೂ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ಮಲಿಕ್ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಒಟ್ಟು 288 ವಿಧಾನಸಭಾ ಕ್ಷೇತ್ರಗಳ ಪೈಕಿ 2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 105 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸುವ ಮೂಲಕ ಏಕೈಕ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಶಿವಸೇನೆ 56, ಎನ್ಸಿಪಿ 54 ಮತ್ತು ಕಾಂಗ್ರೆಸ್ 44 ಸ್ಥಾನಗಳೊಂದಿಗೆ ನಂತರದ ಸ್ಥಾನದಲ್ಲಿವೆ.
ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಹೊಂದಿದ್ದವು. ಆದರೆ, ಸಿಎಂ ಪದವಿ ವಿಚಾರವಾಗಿ ಉಭಯ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ್ದರಿಂದ, ಅಲ್ಲಿನ ರಾಜಕೀಯ ಸಮೀಕರಣ ಬದಲಾಗಿ, ಎನ್ಸಿಪಿ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಶಿವಸೇನೆ ಸರ್ಕಾರ ರಚಿಸಿದೆ.
ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗ, ಟೀಮ್ ಇಂಡಿಯಾ ಜನಪ್ರಿಯ ತಂಡ