ನವದೆಹಲಿ: ಉತ್ತರ ಪ್ರದೇಶದ ಮಥುರಾದಲ್ಲಿರುವ ಹದಿನೇಳನೇ ಶತಮಾನದ ಶಾಹಿ ಈದ್ಗಾ ಮಸೀದಿಯನ್ನು ಸಮೀಕ್ಷೆ ಮಾಡಲು ಅನುಮತಿ ನೀಡಿ ಅಲಹಬಾದ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಇಂದು (ಜ.16) ತಡೆಯಾಜ್ಞೆ ನೀಡಿದೆ.
ವಾರಣಾಸಿಯಯಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ನಡೆಸಿದ ರೀತಿಯಲ್ಲೇ ನ್ಯಾಯಾಲಯದಿಂದ ನೇಮಕಗೊಂಡ ಮತ್ತು ಮೇಲ್ವಿಚಾರಣೆಯ ಅಡ್ವೋಕೇಟ್ ಕಮಿಷನರ್ ಸಮೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್ ಈ ಹಿಂದೆ ಒಪ್ಪಿಗೆ ನೀಡಿತ್ತು.
ಹಿಂದು ಸಂಘಟನೆಗಳು ವಾದವೇನು?
ಮಥುರಾದಲ್ಲಿರುವ ಮಸೀದಿಯನ್ನು ಶ್ರೀಕೃಷ್ಣನ ಜನ್ಮ ಸ್ಥಳದಲ್ಲಿ ನಿರ್ಮಿಸಲಾಗಿದ್ದು, ಸಮೀಕ್ಷೆಯ ಅಗತ್ಯ ಇದೆ ಇದೆ ಹಿಂದು ಸಂಘಟನೆಗಳು ಬೇಡಿಕೆ ಇಟ್ಟಿವೆ. ವಿವಾದಿತ 13.37 ಎಕರೆ ಜಮೀನಿನ ಸಂಪೂರ್ಣ ಮಾಲೀಕತ್ವಕ್ಕೆ ಆಗ್ರಹಿಸಿ ಹಿಂದು ಸಂಘಟನೆಯವರು ಮಥುರಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಶತಮಾನಗಳಷ್ಟು ಹಳೆಯದಾದ ಮಸೀದಿಯನ್ನು ಕತ್ರಾ ಕೇಶವ್ ದೇವ್ ದೇವಸ್ಥಾನವನ್ನು ಕೆಡವಿ ನಿರ್ಮಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದಿಂದ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಕಮಲದ ಕೆತ್ತನೆಗಳು
ಅರ್ಜಿದಾರರು ಸಾಕ್ಷಿಯನ್ನು ಸಹ ಕೋರ್ಟಿನಲ್ಲಿ ಉಲ್ಲೇಖಿಸಿದ್ದು, ಮಸೀದಿಯ ಕೆಲವು ಗೋಡೆಗಳ ಮೇಲೆ ಕಮಲದ ಕೆತ್ತನೆಗಳು ಇವೆ. ಅಲ್ಲದೆ, ಹಿಂದು ಪುರಾಣಗಳಲ್ಲಿ ಹಾವಿನ ದೇವತೆಯಾದ ‘ಶೇಷನಾಗ್’ ಅನ್ನು ಹೋಲುವ ಆಕಾರಗಳು ಮಸೀದಿಯಲ್ಲಿ ಇರುವುದು ಹಿಂದು ದೇವಾಲಯವನ್ನು ಕೆಡವಿ ಅದರ ಮೇಲೆ ಮಸೀದಿ ನಿರ್ಮಿಸಿರುವುದನ್ನು ತೋರಿಸುತ್ತದೆ ಎಂದು ಹಿಂದು ಮುಖಂಡರುಗಳು ವಾದಿಸಿದ್ದಾರೆ.
ಮುಸ್ಲಿಂ ಮುಖಂಡರ ಆಕ್ಷೇಪಣೆ
ಇದಕ್ಕೆ ಸಂಬಂಧಿಸಿದ ಅರ್ಜಿಯನ್ನು ಕಳೆದ ವರ್ಷ ಡಿಸೆಂಬರ್ನಲ್ಲಿ ಸ್ಥಳೀಯ ನ್ಯಾಯಾಲಯ ಪುರಸ್ಕರಿಸಿತು. ಬಳಿಕ ಮುಸ್ಲಿಂ ಮುಖಂಡರುಗಳು ಹೈಕೋರ್ಟ್ನಲ್ಲಿ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸಿದರು. 1991ರ ಪೂಜಾ ಸ್ಥಳಗಳ ಕಾಯಿದೆಯನ್ನು ಉಲ್ಲೇಖಿಸಿ, ಹಿಂದು ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲು ಪ್ರಯತ್ನಿಸಿದರು. ಆದರೆ, ಹಿಂದು ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಷ್ಕರಿಸಿ, ಸಮೀಕ್ಷೆಗೆ ಅನುಮತಿ ನೀಡಿತ್ತು.
ಇದಾದ ಬಳಿಕ ಮುಸ್ಲಿಂ ಮುಖಂಡರು ಹೈಕೋರ್ಟ್ ಆದೇಶವನ್ನು ಪ್ರಶ್ನೆ ಮಾಡಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಸಮೀಕ್ಷೆಗೆ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿದೆ. (ಏಜೆನ್ಸೀಸ್)
ಜರ್ಮನಿಯ ಫ್ರಾಂಕ್ಫರ್ಟ್ನಲ್ಲಿ ನಾವಿಕೋತ್ಸವ-2024 ವಿಶ್ವ ಕನ್ನಡ ಸಮ್ಮೇಳನ
“ಪೂಜಿಸಲೆಂದೇ ಹೂಗಳ ತಂದೆ…”ಹಾಡು ಹಾಡಿ ಮೋದಿಯ ಮೆಚ್ಚುಗೆಗೆ ಪಾತ್ರರಾದ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಯಾರು?