ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಹೋಬಳಿ ಮಣಜೂರು ಗ್ರಾಮದ ರೈತರೊಬ್ಬರು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ ಹುಲುಸಾಗಿ ಬೆಳೆದ ಕೋಸು ಬೆಳೆಯನ್ನು ಉತ್ತು ಇಂದು ನಾಶಪಡಿಸಿ ಕಣ್ಣೀರಿಟ್ಟಿದ್ದಾರೆ.
ಗ್ರಾಮದ ರೈತ ಎಂ.ಬಿ. ಆನಂದ ಎಂಬುವರ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕೋಸು ಉತ್ತಮವಾಗಿ ಫಸಲು ಬಿಟ್ಟಿತ್ತು. ಲಾಕ್ ಡೌನ್ ಪರಿಣಾಮ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ ಮನನೊಂದು ಚೆನ್ನಾಗಿ ಬೆಳೆದ ಫಸಲನ್ನು ರೋಟರಿ ಮೂಲಕ ಉತ್ತು ನಾಶ ಮಾಡಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ಬೆಳೆ ಬಿತ್ತಿ ನೀರು ಹಾಯಿಸಿ ಬೆಳೆದ ಬೆಳೆ ಹೊಲದ ತುಂಬೆಲ್ಲ ಕೋಸು ಸಮೃದ್ಧಿಯಾಗಿ ಫಸಲು ನಳ ನಳಿಸುತ್ತಿತ್ತು. ಬೆವರು ಸುರಿಸಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ಬೆಳೆದ ಕೋಸನ್ನು ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲವಾಗಿದ್ದಾರೆ. ಬೆಳೆ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಿದ ವೆಚ್ಚವೂ ಕೈಸೇರದಾಗಿ ಬೆಳೆ ಬೆಳೆದ ಕೈಸುಟ್ಟು ಕೊಳ್ಳುವಂತಾಗಿದೆ.
ಸರ್ಕಾರ ಪರಿಹಾರ ಒದಗಿಸಿ ಬೆಳೆ ನಷ್ಟ ಭರಿಸಿದರೆ ಆರ್ಥಿಕ ಹೊಡೆತದಿಂದ ಚೇತರಿಸಿಕೊಳ್ಳಲು ಸಾಧ್ಯ ಎಂದು ರೈತ ಆನಂದ್ ನೋಂದು ನುಡಿದರು.
ತಾಲೂಕಿನಲ್ಲಿ ಕಳೆದೊಂದು ತಿಂಗಳಿನಿಂದ ಬಹಳಷ್ಟು ರೈತರು ಬೆಲೆ ಕಾಣದೆ ಬೆಳೆದ ಬೆಳೆಯನ್ನೇ ನಾಶಪಡಿಸಿದ್ದಾರೆ. ಯಗಟಿಯಲ್ಲಿ ಭಾಗದ ರೈತರು ಕೋಸು ಬೆಳೆಗೆ ಕುರಿ ಮಂದೆ ಬಿಟ್ಟು ಮೇಯಿಸಿದ್ದರು. ಮದಲಾಪುರ ಗ್ರಾಮದ ರೈತ ಎಂ.ಆರ್. ರಂಗಸ್ವಾಮಿ ಅವರು ಮೆಣಸಿನಕಾಯಿ ಬೆಳೆಯನ್ನು ರೋಟರಿ ಹೊಡೆಸಿ ನಾಶಪಡಿಸಿದ್ದರು. ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಬಿಟ್ಟರೆ ಬಿಡಿಗಾಸು ಪರಿಹಾರ ಸಿಕ್ಕಿಲ್ಲ ಎಂಬುದು ರೈತರ ಅಳಲಾಗಿದೆ.
ಐಸಿಎಸ್ಇ ಮತ್ತು ಐಎಸ್ಸಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ