ಬೆಂಗಳೂರು: ಕರೊನಾ ವೈರಸ್, ಲಾಕ್ಡೌನ್ ಶುರುವಾದಾಗಿನಿಂದ ರಾಜ್ಯ ಸಾರಿಗೆ ಸಂಸ್ಥೆ ನಷ್ಟದಲ್ಲಿಯೇ ಇದೆ. ಒಂದಷ್ಟು ಕಾಲ ಬಸ್ಗಳು ಸಂಚರಿಸಲಿಲ್ಲ. ಈಗಲೂ ಪೂರ್ಣ ಪ್ರಮಾಣದಲ್ಲಿ ಸಂಚರಿಸುತ್ತಿಲ್ಲ.
ಈ ಮಧ್ಯೆ ಇನ್ನೊಂದು ವದಂತಿ ಹಬ್ಬಿತ್ತು. ಈ ಬಾರಿ ವಿದ್ಯಾರ್ಥಿಗಳ ಬಸ್ ಪಾಸ್ ದರ ಹೆಚ್ಚಿಸಲಾಗುತ್ತದೆ ಎಂಬ ಸುದ್ದಿಯೊಂದು ಹರಿದಾಡುತ್ತಿತ್ತು.
ಇದೀಗ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು ಸ್ಪಷ್ಟನೆ ನೀಡಿ, ವಿದ್ಯಾರ್ಥಿಗಳಿಗೆ ಇಷ್ಟುಕಾಲ ರಿಯಾಯಿತಿ ದರದಲ್ಲಿ ನೀಡುತ್ತಿದ್ದ ಬಸ್ಪಾಸ್ ದರದಲ್ಲಿ ಹೆಚ್ಚಳ ಮಾಡುವುದಿಲ್ಲ. ಹಿಂದಿನ ಮಾನದಂಡಗಳನ್ನು ಬದಲಿಸುವ ಉದ್ದೇಶವಿಲ್ಲ. ಹಾಗಾಗಿ ವಿದ್ಯಾರ್ಥಿಗಳು, ಪಾಲಕರು ಆತಂಕಪಡುವುದು ಬೇಡ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಬಿಜೆಪಿಗೂ…ನಿಮಗೂ ಏನೋ ಲಿಂಕ್ ಇದೆ’: ಫೇಸ್ಬುಕ್ ಸಿಇಒಗೆ ಪತ್ರ
ವಿದ್ಯಾರ್ಥಿಗಳ ಬಸ್ಪಾಸ್ ದರ ಹೆಚ್ಚು ಮಾಡಲಾಗುತ್ತದೆ ಎಂಬುದು ವದಂತಿಯಷ್ಟೇ. ಕಳೆದ ಶೈಕ್ಷಣಿಕ ವರ್ಷದಲ್ಲಿ ಯಾವ ನಿಯಮಗಳ ಅನುಸಾರ ಬಸ್ಪಾಸ್ ವಿತರಣೆ ಮಾಡಲಾಗುತ್ತಿತ್ತೋ, ಅದೇ ದರದಲ್ಲಿಯೇ ಈ ಬಾರಿಯೂ ವಿತರಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.