ನವದೆಹಲಿ: ಭಾರತ ಮತ್ತು ಚೀನಾ ನಡುವೆ ಲಡಾಖ್ ಪ್ರದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಭಾರತದ ಒತ್ತಡಕ್ಕೆ ಬುಧವಾರ ಮಣಿದಂತೆ ಕಂಡುಬಂದರು ಚೀನಿ ಯೋಧರು ಮಾತ್ರ ಗಡಿಯ ನಾಲ್ಕು ಕಡೆಗಳಲ್ಲಿ ಬಲವಾಗಿ ಕಾಲೂರಿಕೊಂಡು ನಿಂತುಕೊಂಡಿದ್ದು, ಹಿಂದೆ ಸರಿಯಲು ನಿರಾಕರಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತದ ಯೋಧರು ಕೂಡ ತುಂಬಾ ಎಚ್ಚರಿಕೆಯಿಂದ ಗಡಿ ಕಾಯುತ್ತಾ ಕುಳಿತಿರುವುದರಿಂದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.
ಉಭಯ ರಾಷ್ಟ್ರಗಳು ತಮ್ಮ ಪಟ್ಟುಗಳನ್ನು ಸಡಿಸಿಸಲು ನಿರಾಕರಿಸುತ್ತಿವೆ. ಹೀಗಾಗಿ ಗಡಿಯಲ್ಲಿನ ಪರಿಸ್ಥಿತಿ ಯಾವಾಗ ಯಥಾಸ್ಥಿತಿಗೆ ಮರಳುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಹೀಗಾಗಿ ಲಡಾಖ್ ವಲಯದ ಗಲ್ವಾನ್ ಕಣಿವೆ ಮತ್ತು ಪ್ಯಾಂಗಾಂಗ್ ತ್ಸೊ ಪ್ರದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಈಗಲೂ ಮುಂದುವರಿದಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಇಂಥದ್ದೊಂದು ದುಸ್ಥಿತಿ ಹಿಂದೆಂದೂ ಬಂದಿರಲಿಲ್ಲ, ಅರ್ಥಶಾಸ್ತ್ರದ ಸಿದ್ಧಾಂತವನ್ನೇ ಬುಡಮೇಲಾಗಿಸಿದ ಕರೊನಾ
ಗಲ್ವಾನ್ ಕಣಿವೆಯಲ್ಲಿ ಮೂರು ಕಡೆ ಮತ್ತು ಪ್ಯಾಂಗಾಂಗ್ ತ್ಸೊ ಪ್ರದೇಶ ಸೇರಿ ಒಟ್ಟು ನಾಲ್ಕು ಕಡೆಗಳಲ್ಲಿ ಚೀನಾದ ಸೇನಾ ಜಮಾವಣೆ ಹಾಗೆಯೇ ಮುಂದುವರಿದಿದೆ. ಅದರಂತೆ ಭಾರತೀಯ ಯೋಧರ ಜಮಾವಣೆ ಕೂಡು ಹಾಗೆಯೇ ಮುಂದುವರಿದಿದ್ದು, ಹಾಲಿ ಇರುವ ಯೋಧರಿಗೆ ಬಿಡುವು ನೀಡುವ ಉದ್ದೇಶದಿಂದ ಇನ್ನೊಂದು ಯೋಧರ ತಂಡಕ್ಕೆ ಹವಾಮಾನಕ್ಕೆ ಹೊಂದಿಕೊಳ್ಳುವ ತರಬೇತಿ ನೀಡಲಾಗುತ್ತಿದೆ.
ಗಲ್ವಾನ್ ನಲ್ಲಾಕ್ಕೆ ಅಡ್ಡಲಾಗಿ ಭಾರತದ ಸೇತುವೆ ನಿರ್ಮಾಣ ಹಾಗೂ ಪ್ಯಾಂಗಾಂಗ್ ತ್ಸೊ ಬಳಿ ವೀಕ್ಷಣಾ ಗೋಪುರ ನಿರ್ಮಾಣಕ್ಕೆ ಆಕ್ಷೇಪಿಸಿ ಚೀನಾ ತನ್ನ ಸೈನ್ಯವನ್ನು ಜಮಾವಣೆ ಮಾಡಿದೆ. ಭಾರತ ತನ್ನ ಗಡಿ ಪ್ರದೇಶದೊಳಗೆ ಏರ್ಫೀಲ್ಡ್ ಹಾಗೂ ರಸ್ತೆ ನಿರ್ಮಿಸುವುದು ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಯಾರೊಬ್ಬರೂ ಆಕ್ಷೇಪಿಸುವಂತಿಲ್ಲ. ಆದರೂ ಚೀನಾ ಆಕ್ಷೇಪಿಸುತ್ತಿರುವುದು ಅಚ್ಚರಿಯ ಸಂಗತಿ. ಆದೇನೇ ಆದರೂ ಭಾರತ ಮಾತ್ರ ತಾನು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸುವ ಮಾತೇ ಇಲ್ಲ ಎಂದು ಸೇನಾಪಡೆ ಮೂಲಗಳು ಹೇಳಿವೆ.
ಕರೊನಾ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದ್ದ ಕಂಪನಿಗೆ ಹಿನ್ನಡೆ? ಷೇರು ಮೌಲ್ಯ ಕುಸಿತ