ನವದೆಹಲಿ: ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಪವನ್ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸುವಂತೆ ಅಪರಾಧಿ ಪವನ್ ಗುಪ್ತ ಶುಕ್ರವಾರ ಸಲ್ಲಿಸಿದ್ದ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದ. ಅಪರಾಧ ನಡೆದಂತಹ ಸಮಯದಲ್ಲಿ ಶಾಲಾ ಪ್ರಮಾಣ ಪತ್ರದ ಪ್ರಕಾರ ನನಗೆ 16 ವರ್ಷ 2 ತಿಂಗಳು ವಯಸ್ಸಾಗಿತ್ತು. ಹೀಗಾಗಿ ಬಾಲಾಪರಾಧಿ ಅಡಿಯನ್ನು ನನ್ನನ್ನು ಪರಿಗಣಿಸಿ ಎಂದು ಪವನ್ ಕೋರಿದ್ದ.
ಮಾರ್ಚ್ 3ಕ್ಕೆ ಮರಣದಂಡನೆ
ಈಗಾಗಲೇ ಗಲ್ಲುಶಿಕ್ಷೆ ಎರಡು ಬಾರಿ ಮುಂದಕ್ಕೆ ಹೋಗಿದ್ದು, ಫೆ.17ರಂದು ವಿಚಾರಣಾಧೀನ ನ್ಯಾಯಾಲಯ ಹೊಸದಾಗಿ ಡೆತ್ ವಾರೆಂಟ್ ಅನ್ನು ವಿತರಿಸಿದೆ. ಅದರನ್ವಯ ಮಾರ್ಚ್ 3ರಂದು ಪವನ್ ಗುಪ್ತಾ(26) ಸೇರಿ ಉಳಿದ ಮೂವರು ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್(32), ವಿನಯ್ ಕುಮಾರ್ ಶರ್ಮ(26) ಮತ್ತು ಅಕ್ಷಯ್ ಕುಮಾರ್(31)ಗೆ ಗಲ್ಲು ಶಿಕ್ಷೆ ನಿಗದಿಯಾಗಿದೆ.
ಕ್ಷಮಾಧಾನ ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮುಕೇಶ್, ವಿನಯ್ ಮತ್ತು ಅಕ್ಷಯ್ ಸಲ್ಲಿಸಿದ್ದ ಅರ್ಜಿ ಕೂಡ ತಿರಸ್ಕೃತಗೊಂಡಿದೆ. ಉಳಿದಂತೆ ಪವನ್ ಗುಪ್ತಾ ಕ್ಷಮಾಧಾನ ಅರ್ಜಿ ಸಲ್ಲಿಸಿಲ್ಲ. ಈಗಾಗಲೇ ಏನೇ ಕಾನೂನು ಪ್ರಕ್ರಿಯೆ ಇದ್ದರೂ ಒಂದು ವಾರದೊಳಗೆ ಮುಗಿಸಿಕೊಳ್ಳಬೇಕೆಂಬ ಸುಪ್ರಿಂಕೋರ್ಟ್ ಗಡುವು ಮುಗಿದು ಹೋಗಿದೆ. ಹೀಗಾಗಿ ನಾಳೆ ಅಪರಾಧಿಗಳಿಗೆ ಗಲ್ಲುಶಿಕ್ಷೆ ಕಾಯಂ ಆಗಿದೆ.
ಗಲ್ಲುಶಿಕ್ಷೆ ಮತ್ತೆ ಮುಂದಕ್ಕೆ ಹೋಗುತ್ತಾ?
ಕಳೆದ ಮಂಗಳವಾರ ನ್ಯಾಯಮೂರ್ತಿ ಆರ್. ಭಾನುಮತಿ, ಅಶೋಕ್ ಭೂಷಣ್ ಮತ್ತು ನವೀನ್ ಸಿನ್ಹಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ. ಎಲ್ಲ ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸಬೇಕೆಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿತ್ತು. ನಿರ್ಭಯಾ ಪಾಲಕರು ಕೂಡ ಇದನ್ನೇ ಪ್ರಶ್ನಿಸಿ ಅರ್ಜಿ ದಾಖಲಿಸಿದ್ದಾರೆ.
ಈ ಸಂಬಂಧ ಸುಪ್ರೀಂಕೋರ್ಟ್ ಮಾ.5 ರಂದು ವಿಚಾರಣೆ ನಡೆಸುವುದಾಗಿ ಹೇಳಿದ್ದು, ಈಗಾಗಲೇ ಮಾ.3 ರಂದು ಅಪರಾಧಿಗಳನ್ನು ಗಲ್ಲಿಗೇರಿಸಲು ಹೊರಡಿಸಿರುವ ವಾರಂಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪ್ರಕರಣವೇನು?
23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯನ್ನು 2012r ಡಿಸೆಂಬರ್ 16ರಂದು ಬಾಲಾಪಾರಾಧಿ ಸೇರಿದಂತೆ ಒಟ್ಟು ಆರು ಮಂದಿ ಮೃಗೀಯವಾಗಿ ಅತ್ಯಾಚಾರವೆಸಗಿ, ಕೊಲೆಗೈದು ವಿಕೃತಿ ಮೆರೆದಿದ್ದರು.
ಒಟ್ಟು ಆರು ಅಪರಾಧಿಗಳಲ್ಲಿ ರಾಮ ಸಿಂಗ್ ತಿಹಾರ್ ಜೈಲಿನಲ್ಲೇ 2013 ಮಾರ್ಚ್ನಲ್ಲಿ ಪಾಪಾಪ್ರಜ್ಞೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ಮತ್ತೊಬ್ಬ ಬಾಲಾಪಾರಾಧಿಯನ್ನು ಅಪರಾಧ ನಡೆದ ಮೂರು ವರ್ಷಗಳ ಬಳಿಕ ಬಿಡುಗಡೆ ಮಾಡಲಾಗಿತ್ತು. (ಏಜೆನ್ಸೀಸ್)