ಬೆಂಗಳೂರು ಹೊಸ ಆಲೋಚನೆಗಳು, ನಾವಿನ್ಯತೆಯೇ ಇಂದಿನ ಪ್ರಪಂಚವಾಗಿದೆ. ಇಂಜಿನಿಯರಿಂಗ್ ಪದವೀಧರರು ತಮ್ಮಲ್ಲಿನ ಕೌಶಲಗಳನ್ನು ಬಳಸಿಕೊಂಡು ಪ್ರಗತಿ ಕಾಣುವ ಜತೆಗೆ ವೈಯಕ್ತಿಕ ಜೀವನದಲ್ಲಿ ನೈತಿಕತೆ ಮತ್ತು ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ಕಲ್ಪಕಂ ಐಜಿಸಿಎಆರ್ನ ಎಂಜಿಎಂ ಮತ್ತು ಎಂಎಸ್ಜಿ ನಿರ್ದೇಶಕ ಡಾ. ಆರ್. ದಿವಾಕರ್ ತಿಳಿಸಿದರು.
ಶನಿವಾರ ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್ನಲ್ಲಿ ನಡೆದ ಆರ್.ವಿ. ತಾಂತ್ರಿಕ ಮಹಾವಿದ್ಯಾಲಯದ 13ನೇ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ವೃತ್ತಿ ಜೀವನದಲ್ಲಿ ಎಂದಿಗೂ ಭವಿಷ್ಯ ಕುರಿತು ಯೋಚಿಸಬೇಕು ಮತ್ತು ಹೊಸತನ್ನು ಅಳವಡಿಸಿಕೊಂಡು ಪ್ರಸ್ತುತವಾಗಬೇಕು. ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಂಡು ಬದಲಾವಣೆಯನ್ನು ಸ್ವೀಕರಿಸಿಡಾಗ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇಂದು ಪ್ರತಿ ದಿನ ತಂತ್ರಜ್ಞಾನ ಬದಲಾವಣೆಯಾಗುತ್ತಿದೆ. ಮುಂದುವರಿದ ತಂತ್ರಜ್ಞಾನ ಅಳವಡಿಸಿಕೊಳ್ಳುವುದು, ಸಮಾಜಿಕ ಹೊಣೆಗಾರಿಕೆ, ಮೌಲ್ಯಗಳನ್ನು ಗೌರವಿಸಿವುದು, ಆವಿಷ್ಕೃತ ಮನೋಭಾವದಿಂದ ಹೊಸ ಸವಾಲುಗಳನ್ನು ಎದುರಿಸಲು ಪ್ರತಿ ದಿನ ಸಿದ್ಧರಾಗಿರಿ ಎಂದರು.
ಮ್ಯಾಗ್ಲಟೆಕ್ ಸಂಸ್ಥಾಪಕ ರಾಜೀವ್ ಚಂದ್ರಬಾನು ಮಾತನಾಡಿ, ವಿಶೇಷವಾಗಿ ಈಗ ಇಂಜಿನಿಯರಿಂಗ್ ಮುಗಿಸಿರುವ ವಿದ್ಯಾರ್ಥಿಗಳು ಕರೊನಾ ಸಾಂಕ್ರಾಮಿಕ ಸಮಯದಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸಿದ್ದೀರಿ. ಆದ್ದರಿಂದ ಕಠಿಣ ಪರಿಶ್ರಮ, ನಿರಂತರ ಪ್ರಯತ್ನ, ಹೊಸದನ್ನು ಕಲಿಯುವ ಕುತೂಹಲ ಇರಲಿ ಎಂದು ಆಶಿಸಿದರು.
ಅಸಾಧ್ಯವಾದದ್ದನ್ನು ಸಾಧಿಸುವ ಭರವಸೆಗಳು ನಿಮ್ಮಲ್ಲಿರಲಿ. ಕಲಿಕೆ ಮತ್ತು ಕಾರ್ಯಭಾರ ನಿರ್ವಹಿಸುವ ವೇಳೆ ಸ್ಪಷ್ಟವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಎಂ.ಪಿ. ಶ್ಯಾಮ್, ಉಪಾಧ್ಯಕ್ಷರಾದ ಎನ್.ಆರ್. ಪಂಡಿತಾರಾಧ್ಯ, ಸಿ. ವಿನೋದ್ ಹಯಗ್ರೀವ್, ಗೌರವ ಕಾರ್ಯದರ್ಶಿ ಡಾ. ಎವಿಎಸ್ ಮೂರ್ತಿ, ಉಪ ಪ್ರಾಂಶುಪಾಲೆ ಡಾ. ಗೀತಾ ಉಪಸ್ಥಿತರಿದ್ದರು.
1,102 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
12 ಚಿನ್ನ ಮತ್ತು 12 ಬೆಳ್ಳಿ ಪದಕ ಸೇರಿ ಸಮಾರಂಭದಲ್ಲಿ 2022-23ನೇ ಸಾಲಿನಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ 1,102 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಏರೋಸ್ಪೇಸ್- ನಿಹಾಲ್ ಹೆಬ್ಬಾರ್, ಜೈವಿಕ ತಂತ್ರಜ್ಞಾನ- ವಿಭಾ ಆರ್., ಕೆಮಿಕಲ್- ಅದಿತಿ ಪಾಂಡೆ, ಕಂಪ್ಯೂಟರ್ ಸೈನ್ಸ್- ಪ್ರಣೀತಾ ಇಮ್ಮಡಿಶೆಟ್ಟಿ, ಸಿವಿಲ್- ಆದ್ಯಾನ್ ಎಚ್. ಕೋಟಾವಾಲ, ಎಲೆಕ್ಟ್ರಾನಿಕ್ಸ್ ಆೃಂಡ್ ಕಮ್ಯೂನಿಕೇಷನ್- ಪರ್ಣಿಕಾ, ಎಲೆಕ್ಟ್ರಿಕಲ್ಸ್ ಆೃಂಡ್ ಎಲೆಕ್ಟ್ರಾನಿಕ್ಸ್- ಜಾಹ್ನವಿ ಆರ್., ಎಲೆಕ್ಟ್ರಾನಿಕ್ಸ್ ಆೃಂಡ್ ಟೆಲಿಕಮ್ಯೂನಿಕೇಷನ್- ಸುಮುಖ ಎಸ್ ಶ್ರೀವತ್ಸ, ಇಂಡಸ್ಟ್ರೀಯಲ್- ಬೃಂದಾ ಸಾಯಿ, ಮಾಹಿತಿ ವಿಜ್ಞಾನ- ಆಕಾಶ್ ಕಲ್ಮೇಶ್ ಹಿರೇಮಠ್ ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದರು.
ವಿದ್ಯಾರ್ಥಿಗಳು ಒಂದೇ ಮನಸ್ಸಿನಿಂದ ದೃಢ ನಿರ್ಧಾರ ಮಾಡಿದಾಗ ಅಸಾಧ್ಯ ಕೂಡ ಸಾಧ್ಯವಾಗಲಿದೆ. ಪದವೀಧರ ವಿದ್ಯಾರ್ಥಿಗಳ ಭವಿಷ್ಯ ಯಶಸ್ಸಿನಿಂದ ಕೂಡಿರಲಿ.
– ಡಾ. ಕೆ.ಎನ್. ಸುಬ್ರಮಣ್ಯ, ಪ್ರಾಂಶುಪಾಲ