ಸೊರಬ: ತಾಲೂಕಿನ ಬಂಕಸಾಣ ಸಮೀಪ ವರದಾ ಮತ್ತು ದಂಡಾವತಿ ಸಂಗಮದ ಬಳಿ ಜಡೆ ಹಿರೇಮಠದ ಶ್ರೀ ಸದ್ಗುರು ಸೇವಾ ಟ್ರಸ್ಟ್ನಿಂದ ನಿರ್ಮಾಣಗೊಂಡಿರುವ ಸಮಾಧಾನ ಎಂಬ ಹೆಸರಿನ ಮಠದ ಕಟ್ಟಡದ ಲೋಕಾರ್ಪಣೆ ಸಮಾರಂಭ ೆ.10 ಮತ್ತು 11ರಂದು ನಡೆಯಲಿದೆ ಎಂದು ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಎಲ್ಲರಿಗೂ ಸಮಾಧಾನ ದೊರೆಯಬೇಕು ಎಂಬುವುದೇ ಮಠದ ಇಚ್ಛೆಯಾಗಿದೆ. ಹಣದಿಂದ ಮನಸ್ಸಿನ ನೆಮ್ಮದಿಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಮಠ ಮಂದಿರದಲ್ಲಿನ ಭಕ್ತಿ ಮತ್ತು ಧಾರ್ಮಿಕ ವಿಚಾರಧಾರೆಗಳು ದೊರೆಯಲೆಂದು ಈ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ ಎಂದರು.
ವರದಾ ಮತ್ತು ದಂಡಾವತಿಯ ನದಿಯ ಸಂಗಮದ ಸ್ಥಳದಲ್ಲಿ 3 ಎಕರೆ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣವಾಗಿದೆ. ೆ.10ರಂದು ವಾಸ್ತು ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಹಾಗೂ ಶಿವದೀಕ್ಷೆ-ಅಯ್ಯಚಾರ ನೆರವೇರಲಿದೆ. ೆ.11ರಂದು ಗುರುಪ್ರವೇಶ, ಗುರುಪೂಜೆ ಹಾಗೂ ಉದ್ಘಾಟನಾ ಸಮಾರಂಭ ನೆರವೇರುವುದು. ಈ ಸಂದರ್ಭದಲ್ಲಿ ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗ ಸ್ವಾಮೀಜಿಗಳ ನಾಣ್ಯದ ತುಲಾಭಾರ ಸೇವೆ ಸಲ್ಲಿಸಲು ಅವಕಾಶವಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀ ಗುರುಸಿದ್ದ ರಾಜಯೋಗೇಂದ್ರ ಸ್ವಾಮೀಜಿ, ಮೌನ ತಪಸ್ವಿ ಜಡೆಯ ಶ್ರೀ ಶಾಂತಲಿಂಗ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ, ಹಿರೇಮಾಗಡಿಯ ಶ್ರೀ ಶಿವಮೂರ್ತಿ ಮುರುಘ ರಾಜೇಂದ್ರ ಸ್ವಾಮೀಜಿ, ಶಾಂತಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ತೊಗರ್ಸಿಯ ಶ್ರೀ ಮಹಾಂತ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಅನೇಕ ಶರಣರು ಪಾಲ್ಗೊಳ್ಳಲಿದ್ದಾರೆ. ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಅಲ್ಲಮ ವೀರಭದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ರುದ್ರೇಗೌಡ ಸೇರಿದಂತೆ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಟೌನ್ ವೀರಶೈವ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ನಿಜಗುಣ, ಕಾರ್ಯದರ್ಶಿ ನಾಗರಾಜ ಗುತ್ತಿ, ವೀರಶೈವ ಸಮಾಜದ ಮಧ್ಯ ಕರ್ನಾಟಕದ ಅಧ್ಯಕ್ಷ ವೀರೇಶ್, ಚಂದ್ರಶೇಖರ ನಿಜಗುಣ, ಲಿಂಗರಾಜ ದೂಪದಮಠ ಇತರರಿದ್ದರು.