ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಬೈಂದೂರು ತಾಲೂಕು ಇಡೂರು ಕುಂಜ್ಞಾಡಿ ಗ್ರಾಮಕ್ಕೆ ಕೆಳ ಹೊಸೂರು ಮೇಲ್ ಹೊಸೂರು ಸೇರಿಕೊಳ್ಳುತ್ತದೆ. ಸ್ವತಂತ್ರ ಗ್ರಾಮದ ಎಲ್ಲ ಅರ್ಹತೆಯಿದ್ದರೂ ಪರಾವಲಂಬಿ. ಕೆಳ ಹೊಸೂರು ಮತ್ತು ಮೇಲ್ಹೊಸೂರಿನಲ್ಲಿ ಒಟ್ಟು 340 ಮನೆಗಳಿದ್ದು,3500 ಜನಸಂಖ್ಯೆಯಿದೆ. ಆದರೆ ನೆಟ್ವರ್ಕ್ ಸಮಸ್ಯೆಯಿಂದ ಇಲ್ಲಿನ 60ಕ್ಕೂ ಅಧಿಕ ವಿದ್ಯಾರ್ಥಿಗಳು, 20ಕ್ಕೂ ಹೆಚ್ಚು ವರ್ಕ್ಫ್ರಮ್ ಹೋಮ್ ಉದ್ಯೋಗಿಗಳ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಿದೆ.
ಪ್ರಾಥಮಿಕ ಶಾಲಾ ಮಕ್ಕಳಿಂದ ಹಿಡಿದು, ಪದವಿ ತನಕ ವಿದ್ಯಾರ್ಥಿಗಳು, ವರ್ಕ್ ಫ್ರಮ್ ಹೋಮ್ನಿಂದ ಮೊದಲ್ಗೊಂಡು ಮೊಬೈಲ್ ಬಳಸುವ ಗ್ರಾಹಕರಿಗೂ ಇಂಟರ್ನೆಟ್ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಮೊಬೈಲ್ ಬಳಸುವವರು ನೆಟ್ ಸಂಪರ್ಕಕ್ಕಾಗಿ ಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಾವಡಿ ಏರಿದರೂ ಸಂಪರ್ಕ ಸಿಗುತ್ತಿಲ್ಲ.
ಶಿಕ್ಷಕರಿಗೆ ಹೆಚ್ಚುವರಿ ಕೆಲಸ: ನೆಟ್ವರ್ಕ್ ಸಮಸ್ಯೆಯಿಂದ ಶಾಲಾ ಶಿಕ್ಷಕರಿಗೆ ಹೆಚ್ಚುವರಿ ಕೆಲಸದ ಜತೆ 30 ಸಾವಿರ ಕಿಸೆಯಿಂದ ಖರ್ಚು ಮಾಡಬೇಕು. ಮೊಬೈಲ್ ಸಿಗದಿದ್ದರಿಂದ ಎಲ್ಲ ಮಕ್ಕಳಿಗೂ ಮೊಬೈಲಿಗೆ ಬಂದ ಪಾಠಗಳನ್ನು ಡೌನ್ಲೋಡ್ ಮಾಡಿ, ಪ್ರಿಂಟ್ ತೆಗೆದು ಮಕ್ಕಳಿಗೆ ತಲುಪಿಸಬೇಕು. ಪೇಪರ್ ಜೆರಾಕ್ಸ್ ಖರ್ಚು ಶಿಕ್ಷಕರ ಜೇಬಿಗೆ. ಸರ್ಕಾರ ಮೂರು ಕಂತಲ್ಲಿ ಒಟ್ಟು 12 ಸಾವಿರ ನೀಡುತ್ತಿದೆ. ಪಾಲಕರು ಮಕ್ಕಳ ಜತೆ ಶಾಲೆಗೆ ಬಂದು ಜೆರಾಕ್ಸ್ ಪ್ರತಿ ತೆಗೆದುಕೊಂಡು ಹೋಗಬೇಕಿದ್ದು, ಪಠ್ಯಗಳನ್ನು ಮಕ್ಕಳಿಗೆ ಮೊಬೈಲ್ನಲ್ಲಿ ಕಳುಹಿಸುತ್ತೇವೆ ಎಂದು ಶಾಲಾ ಮುಖ್ಯಶಿಕ್ಷಕ ಬಾಬು ಗೌಡ ವಿಜಯವಾಣಿಗೆ ತಿಳಿಸಿದ್ದಾರೆ.
ಮೇಲ್ ಹೊಸೂರು ನೆಟ್ವರ್ಕ್ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರು, ಶಾಸಕರಿಗೆ ಮನವಿ ಕೊಟ್ಟು ಸಾಕಾಗಿದೆ. ದೊಡ್ಡ ಊರಾದ ಮೇಲ್ ಹೊಸೂರು, ಕೆಳ ಹೊಸೂರು ಸ್ವತಂತ್ರ ಗ್ರಾಮದ ಯೋಗ ಸಿಕ್ಕ್ಕಿಲ್ಲ. ಆದರೆ ನೆಟ್ವರ್ಕ್ ಸಮಸ್ಯೆಯಾದರೂ ಪರಿಹಾರವಾಗುತ್ತದೆ ಎಂದರೂ ಅದೂ ಆಗಿಲ್ಲ. ಬೈಂದೂರು ಶಾಸಕರು ತಾಲೂಕಿಗೆ 12 ನೆಟ್ವರ್ಕ್ ಟವರ್ ಮಂಜೂರಾಗಿದೆ ಎಂದಿದ್ದು, ಅದರಲ್ಲಿ ಒಂದು ಟವರ್ ಹೊಸೂರಿಗೆ ಹಾಕುವ ಮೂಲಕ ಹೊಸೂರು ಜನರ ನೆರವಿಗೆ ಬರಬೇಕು.
– ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿ ಮೇಲ್ ಹೊಸೂರುಮನೆಯಿಂದ ನಾಲ್ಕಾರು ಕಿ.ಮೀ. ನಡೆದು ಬಂದು ಆನ್ಲೈನ್ ತರಗತಿ, ಲೈವ್ ಕ್ಲಾಸ್ ನಡೆಯುತ್ತಿರುವಾಗಲೇ ಸಂಪರ್ಕ ಸ್ಥಗಿತವಾಗುವುದರಿಂದ ತೊಂದರೆಯಾಗುತ್ತದೆ. ಹಾಜರಾತಿ ತೆಗೆದುಕೊಳ್ಳುವಾಗ ನೆಟ್ಕಟ್ ಆಗುವುದರಿಂದ ಅಟೆಂಡೆನ್ಸ್ ಕಮ್ಮಿಯಾಗುತ್ತಿದೆ. ಮಳೆ ಮೋಡ ಬಂದರೂ ನೆಟ್ವರ್ಕ್ ಮಾಯವಾಗುತ್ತದೆ. ನೆಟ್ವರ್ಕ್ ಸಮಸ್ಯೆ ಪರಿಹರಿಸುವ ಮೂಲಕ ನೆರವಿಗೆ ಬರಬೇಕು.
– ಸುಶ್ಮಿತಾ ಸುಧಾಕರ ಶೆಟ್ಟಿ, ಬಿಕಾಂ, ವಿದ್ಯಾರ್ಥಿ, ಬಿ.ಬಿ.ಹೆಗ್ಡೆ ಕಾಲೇಜು ಕುಂದಾಪುರಇಂಟರ್ನೆಟ್ ಸಮಸ್ಯೆ ಹಿನ್ನೆಲೆಯಲ್ಲಿ ಬೂಸ್ಟರ್ ಹಾಕಿಕೊಂಡಿದ್ದರೂ ಟವರ್ ವ್ಯಾಪ್ತಿ ದೂರದಲ್ಲಿರುವುದರಿಂದ ನೆಟ್ ಸಂಪರ್ಕ ಸಾಧಿಸಲು ಕಷ್ಟವಾಗುತ್ತಿದೆ. ಮನೆಯಿಂದ ಶಾಲೆಗೆ ಬಂದು ಕೆಲಸಕ್ಕೆ ಕುಳಿತರೆ ಕೆಲಸ ಮಾಡುವುದಕ್ಕಿಂತ ಜಾಸ್ತಿ ನೆಟ್ ಸಂಪರ್ಕಕ್ಕೆ ಕಾಯಬೇಕಿದ್ದು, ಸಂಪರ್ಕ ಇಲ್ಲದೆ ಅನಾವಶ್ಯಕವಾಗಿ ಕೆಲಸಕ್ಕೆ ರಜೆ ಬೀಳುತ್ತಿದೆ
– ಅಕ್ಷಯ ಶೆಟ್ಟಿ, ವರ್ಕ್ ಫ್ರಮ್ ಹೋಮ್ನಲ್ಲಿರುವ
ಸಾಫ್ಟ್ವೇರ್ ಉದ್ಯೋಗಿ