ಮಂಡ್ಯ: ತಾಲೂಕಿನ ಮುತ್ತೇಗೆರೆ ಗ್ರಾಮದ ಅಂಗವಿಕಲ ಸೋಮಾಚಾರಿ ಎಂಬುವರಿಗೆ ಜಿಲ್ಲಾ ಜೆಡಿಎಸ್ ವಕ್ತಾರರೂ ಆದ ಮಂಡ್ಯ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಮಹಾಲಿಂಗೇಗೌಡ ಮುದ್ದನಘಟ್ಟ ಅವರು ಶುಕ್ರವಾರ ಆರ್ಥಿಕ ನೆರವು ನೀಡಿದರು.
ಸೋಮಾಚಾರಿ ಅಂಗವಿಕಲರಾಗಿದ್ದು, ಮಲಗಿರುವ ಸ್ಥಳದಲ್ಲಿಯೇ ಸಣ್ಣಪುಟ್ಟ ಎಲೆಕ್ಟ್ರಿಕಲ್ ರಿಪೇರಿ ಕೆಲಸಗಳನ್ನು ಮಾಡುತ್ತ ಕಷ್ಟದ ಜೀವನ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿ ನೆರವು ನೀಡಿದ್ದೇನೆ. ಅವರ ಆತ್ಮಸ್ಥೈರ್ಯವನ್ನು ಮೆಚ್ಚಿ ಸನ್ಮಾನಿಸಿ ಧೈರ್ಯ ತುಂಬಲಾಗಿದೆ. ಮುಂದಿನ ದಿನದಲ್ಲಿ ಅವರ ಕಷ್ಟಕ್ಕೆ ಸ್ಪಂದಿಸುತ್ತೇನೆ. ಸರ್ಕಾರ ಮತ್ತು ಸಂಘ- ಸಂಸ್ಥೆಗಳು ಇಂತಹ ವ್ಯಕ್ತಿಗಳಿಗೆ ಸಹಾಯಹಸ್ತ ಚಾಚಬೇಕೆಂದು ಮನವಿ ಮಾಡಿದರು.
ಗ್ರಾಮದ ಅಭಿಲಾಷ್, ಹುಲಿಗೌಡ, ಶಶಿ, ಮೋಹನ್, ವೆಂಕಟೇಶ್ ಇತರರಿದ್ದರು.
ಮುನ್ನೆಚ್ಚರಿಕೆ ವಹಿಸಿ: ಮಂಡ್ಯ ನಗರದಲ್ಲಿ ಗುರುವಾರ ಸಂಚಾರ ಠಾಣೆ ಪೊಲೀಸರು ದಂಪತಿ ಜತೆಗೆ ಅಮಾನವೀಯವಾಗಿ ವರ್ತಿಸಿದ ಘಟನೆಯನ್ನು ಖಂಡಿಸಿರುವ ಮಹಾಲಿಂಗೇಗೌಡ, ಈ ಸಂಬಂಧ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮುಂದಿನ ದಿನದಲ್ಲಿ ಇಂತಹ ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾ ಎಸ್ಪಿಗೆ ಮನವಿ ಮಾಡಿದ್ದಾರೆ.